ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ನಮ್ಮ ಆಲೋಚನೆ, ಅರಿವು, ಆಚಾರ ಮತ್ತು ಅನುಸರಣೆಗಳು ನಿರ್ಮಲವಾಗಿದ್ದಲ್ಲಿ ಬದುಕು ಹಸನಾಗುತ್ತದೆ ಎನ್ನುವುದನ್ನು ಜಗಜ್ಯೋತಿ ಬಸವೇಶ್ವರರು ತಿಳಿಸಿಕೊಟ್ಟಿದ್ದಾರೆ ಎಂದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.ಪಟ್ಟಣದ ಗುರುಬೂದಿ ಮಂಗಳ ಮಂಟಪದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವ ಸಮಿತಿಯಿಂದ ಆಯೋಜಿಸಿದ್ದ ಬಸವ ಜಯಂತಿ-2024ರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
12ನೇ ಶತಮಾನಲ್ಲಿ ರಚಿತವಾದ ವಚನಗಳು ಇಂದಿಗೂ ಚಿರಸ್ಥಾಯಿಯಾಗಿ ನಿಲ್ಲಲು ವಚನಗಳಲ್ಲಿನ ಸರಳ ಬದುಕಿನ ಮಾರ್ಗದರ್ಶನ ಮತು ಶರಣರ ಸರಳ ಜೀವನಾದರ್ಶಗಳೇ ಕಾರಣ. ಆಡಂಬರದ ಬದುಕಿಗೆ ಮನಸೋತು, ಐಹಿಕ ಭೋಗಗಳಲ್ಲಿ ಮುಳುಗಿರುವ ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಬದುಕು ಕಂಡುಕೊಂಡಿರುವುದು ದುರಂತಕ್ಕೆ ಹಾದಿಯಾಗಿದೆ. ನಮ್ಮ ಆಲೋಚನೆಗಳಲ್ಲಿ ಒಳ್ಳೆಯತನ, ಅರಿವಿನ ಹಸಿವು, ಸನ್ನಡತೆ ಮತ್ತು ಒಳ್ಳೆಯದರ ಅನುಸರಣೆಯಿಂದ ಮಾತ್ರ ಬದುಕು ಹಸನಾಗಲು ಸಾಧ್ಯ. ಈ ನಿಟ್ಟಿನಲ್ಲಿ ಬಸವಣ್ಣ ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ ಎಂದರು.ಗಾವಡಗೆರೆ ಶ್ರೀ ಗುರುಲಿಂಗಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿ, ಜಗಜ್ಯೋತಿ ಬಸವಣ್ಣ ಸಮಗ್ರ ಕ್ರಾಂತಿಯ ಮೂಲಪುರುಷರಾಗಿದ್ದಾರೆ. ಅವರು ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ಕ್ರಾಂತಿಯನ್ನು ಉಂಟು ಮಾಡಲಿಲ್ಲ. ಬದಲಾಗಿ ಆರ್ಥಿಕ, ಸಾಮಾಜಿಕ, ಅಸ್ಪೃಶ್ಯತೆ, ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲಿ ಅಂದಿನ ಕಾಲದಲ್ಲೇ ಹೊಸ ಚಿಂತನೆಯನ್ನು ಜನರ ಮನಸಲ್ಲಿ ತುಂಬಿದರು. ಮನುಕುಲದ ಕಲ್ಯಾಣವೇ ಅವರ ಧೀಮಂತ್ರವಾಗಿತ್ತು. ವಚನಗಳನ್ನು ಓದುವ ಮೂಲಕ ಕೇವಲ ಹೊರಗಿನ ಬದುಕಿಗೆ ತೋರ್ಪಡಿಸುವ ಪ್ರವೃತ್ತಿಯನ್ನು ನಾವು ಕೈಬಿಟ್ಟು ಒಳಗಿನ ಬದುಕಿನ ಬದಲಾವಣೆಯನ್ನು ತಂದುಕೊಳ್ಳಬೇಕಿದೆ. ಬದುಕಿನಲ್ಲಿ ಮತ್ಸರದ ಗೂಡನ್ನು ಹೊಡೆದೋಡಿಸೋಣ ಎಂದರು.
ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀಸಾಂಬ ಸದಾಶಿವಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ವಚನಕಾರರ ವಚನಗಳು ಇಂದಿಗೂ ಹೊಸಹೊಸ ವಿಚಾರಗಳನ್ನು ನೀಡುತ್ತಾ, ಚರ್ಚೆಗೆ ಒಳಗಾಗುತ್ತಿವೆ ಅಂದರೆ ವಚನಗಳ ಮಹತ್ವವನ್ನು ನಾವು ತಿಳಿದುಕೊಳ್ಳಬೇಕು ಎಂದರು.ಬಸವಬಳಗದ ಅಧ್ಯಕ್ಷ ಕೆ.ಎಸ್. ಬಸವರಾಜು, ಡಾ. ವೃಷಬೇಂದ್ರಸ್ವಾಮಿ, ಹಂದನಹಳ್ಳಿ ಸೋಮಶೇಖರ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮಹಿಳಾ ಬಳಗದ ಸದಸ್ಯರು ಮತ್ತು ಸಮಾಜದ ಬಂಧುಗಳು ಇದ್ದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.