ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 12 ವರ್ಷಗಳ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಯಶಸ್ವಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವಾರು ಪ್ರತಿ ಬೂತ್‍ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್‍ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಆವರಣದಲ್ಲಿ ತಾಲೂಕು ಮಟ್ಟದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ ಎಂದರು.

ಜೊತೆಗೆ ಪ್ರಪಂಚದಾದ್ಯಂತ ಹರಡಿದ್ದ ಮಾರಕ ಕೊರೋನಾ ನಿರ್ಮೂಲನೆಗೆ ವ್ಯಾಕ್ಷಿನ್ ಕಂಡು ಹಿಡಿಯಲು ಶ್ರಮ ವಹಿಸಿದ್ದರು. ನಮ್ಮ ದೇಶ ಅಲ್ಲದೇ, ವಿದೇಶಗಳಿಗೂ ನಮ್ಮಲ್ಲಿ ತಯಾರಿಸಿದ ವ್ಯಾಕ್ಷಿನ್‍ ನೀಡಿ ಅಲ್ಲಿನ ಜನರ ಸಹಾಯಕ್ಕೂ ನಿಂತು ವಿಶ್ವ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು 12 ವರ್ಷ ಯಶಸ್ವಿಗೊಳಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರವಾರು ಪ್ರತಿ ಬೂತ್‍ ಮಟ್ಟದಲ್ಲಿ ಕಾರ್ಯಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮಗಳ ಬೂತ್‍ ಮಟ್ಟದ ಅಧ್ಯಕ್ಷರು, ಮಹಿಳಾಧ್ಯಕ್ಷರು, ಯುವ ಮೋರ್ಚಾ ಅಧ್ಯಕ್ಷರ ನೇತೃತ್ವದಲ್ಲಿ ತನ್ನ ತಾಯಿ ಹೆಸರಿನಲ್ಲಿ ಪರಿಸರ ರಕ್ಷಣೆ ಮಾಡಲು ಸಸಿಗಳ ನೆಟ್ಟು ಪೋಷಿಸಬೇಕು ಎಂದರು.


ಸರ್ಕಾರಿ ಶಾಲೆ, ಸಾರ್ವಜನಿಕ ಸ್ಥಳಗಳು, ಕೆರೆ ಅಂಗಳ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಲ್ಲಿ ಗಿಡನೆಟ್ಟು ನೀರುಣಿಸಿ ಪೋಷಣೆ ಮಾಡಬೇಕು. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಬೇಕು. ಮುಂಬರುವ ಯೋಗ ದಿನದ ಅಂಗವಾಗಿ ಯೋಗ ಕಾರ್ಯಕ್ರಮಗಳ ನೆರವೇರಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್‍, ಮುಖಂಡರಾದ ಟೈಲರ್ ಮೋಹನ್‍, ಕಿರಣ್‍ ಕುಮಾರ್ ಸಿಂಗ್‍, ಮಹಿಳಾ ಮೋರ್ಚಾದ ಶಕುಂತಲ, ಮಹಾಲಿಂಗು, ಕೊತ್ತತಿ ಜಯಶಂಕರ್, ಚಂದ್ರ, ಕೃಪೇಶ್‍, ಚಂದಗಾಲು ಶಂಕರ್, ಚಿನ್ನೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.