ಸಾರಾಂಶ
ಪಾಂಡವಪುರ: ವಿವಿಧೆಡೆ ಕಳವು ಮಾಡಿದ್ದ ಸುಮಾರು 5.20 ಲಕ್ಷ ರು. ಬೆಲೆ ಬಾಳುವ ವಿವಿಧ ಮಾದರಿಯ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಪಟ್ಟಣದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆ.ಆರ್.ನಗರ ನಿವಾಸಿ, ಹಾಲಿ ವಾಸ ತಾಲೂಕಿನ ಚಿನಕುರಳಿ ಗ್ರಾಮದ ರಾಜಾಚಾರಿ ಬಿನ್ ಚಲುವಾಚಾರಿ (41) ಬಂಧಿತ ಆರೋಪಿ. ರಾಜಾಚಾರಿಯು ಸಾಮಿಲ್ ನಲ್ಲಿ ಮರ ಕುಯ್ಯುವ ಕೆಲಸ ಮಾಡುತ್ತಿದ್ದನು. ಈತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಂಡ್ಯ, ಮೈಸೂರು ಜಿಲ್ಲೆ , ನಗರದಲ್ಲಿ ಕಳವು ಮಾಡಿದ್ದ ವಿವಿಧ ಮಾದರಿಯ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಎಸ್ಪಿ, ಎಎಸ್ಪಿಗಳ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಉಪವಿಭಾಗ ಡಿವೈಎಸ್ಪಿ ಮುರಳಿ ನಿರ್ದೇಶನದಂತೆ, ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಆರ್.ವಿವೇಕಾನಂದ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಆರ್.ಬಿ.ಉಮೇಶ, ಕೆ.ಸಿ.ಧರ್ಮಪಾಲ್, ಸಿಬ್ಬಂದಿ ಎನ್.ಶಿವರಾಜ, ವರದರಾಜು, ಎಂ.ಕೆ.ಪ್ರಶಾಂತ, ರಾಜೇಶ್, ತೌಸಿಫ್ ಅವರು ಆರೋಪಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.