ಜಿಲ್ಲೆಯಲ್ಲಿ 15.30 ಜನನ, 7.66 ಮರಣ ದರ: ಜಿಲ್ಲಾಧಿಕಾರಿ ಮಾಹಿತಿ

| Published : Jul 18 2024, 01:39 AM IST

ಜಿಲ್ಲೆಯಲ್ಲಿ 15.30 ಜನನ, 7.66 ಮರಣ ದರ: ಜಿಲ್ಲಾಧಿಕಾರಿ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 916, ನಗರದಲ್ಲಿ 20 ಸೇರಿದಂತೆ 936 ನಾಗರೀಕ ನೋಂದಣಿ ಜನನ- ಮರಣ ನೋಂದಣಿ ಘಟಕಗಳಿವೆ. ಜಿಲ್ಲೆಯಲ್ಲಿ 15.30 ಜನನ ಹಾಗೂ 7.66 ಮರಣ ದರ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಡಿಸಿ ಕಚೇರಿಯಲ್ಲಿ ಜಿ.ಎಂ. ಗಂಗಾಧರ ಸ್ವಾಮಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಸಮನ್ವಯ ಸಮಿತಿ ಸಭೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 916, ನಗರದಲ್ಲಿ 20 ಸೇರಿದಂತೆ 936 ನಾಗರೀಕ ನೋಂದಣಿ ಜನನ- ಮರಣ ನೋಂದಣಿ ಘಟಕಗಳಿವೆ. ಜಿಲ್ಲೆಯಲ್ಲಿ 15.30 ಜನನ ಹಾಗೂ 7.66 ಮರಣ ದರ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನನ ದರವು ಪ್ರತಿ ಸಾವಿರ ಜನಸಂಖ್ಯೆಗೆ 15.30 ಮತ್ತು ಮರಣ ಪ್ರಮಾಣ ಪ್ರತಿ ಸಾವಿರ ಜನಸಂಖ್ಯೆಗೆ 7.66 ರಷ್ಟು ದರವಿದೆ. 2024ರ ಜನವರಿಯಿಂದ ಜೂನ್‌ವರೆಗೆ 7367 ಗಂಡು, 6920 ಹೆಣ್ಣು ಹಾಗೂ 1 ತೃತೀಯ ಲಿಂಗ ಸೇರಿ 14288 ಜನನ ಪ್ರಕರಣ ನೋಂದಣಿಯಾಗಿದೆ ಎಂದರು.

ಮತ್ತು ಇದೇ ಅವಧಿಯಲ್ಲಿ 4541 ಗಂಡು, 3448 ಹೆಣ್ಣು ಹಾಗೂ 1 ತೃತೀಯ ಲಿಂಗ ಸೇರಿ 7990 ಮರಣ ಪ್ರಕರಣಗಳು ಸಂಭವಿಸಿವೆ. ಮತ್ತು 2024ರ ಜನವರಿಯಿಂದ ಜೂನ್ ಅಂತ್ಯದವರೆಗೆ ತಡವಾಗಿ ನೋಂದಾಯಿಸಿದ ಜನನ ಪ್ರಕರಣಗಳಲ್ಲಿ 1565 ಗಂಡು, 1458 ಹೆಣ್ಣು ಸೇರಿ 3023, ಮರಣ ಪ್ರಕರಣಗಳಲ್ಲಿ 1781 ಗಂಡು, 1535 ಹೆಣ್ಣು ಸೇರಿ 3316 ನೋಂದಣಿ ಮಾಡಲಾಗಿದೆ.

ಗ್ರಾಮಾಂತರ ಪ್ರದೇಶದಲ್ಲಿ ನಾಗರೀಕ ನೋಂದಣಿ ಪದ್ಧತಿಯಡಿ ಜುಲೈ 1ರಿಂದ ಗ್ರಾಮಮಟ್ಟದಲ್ಲಿ ನೋಂದಣಾಧಿಕಾರಿಯಾಗಿ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಉಪ ನೋಂದಣಾಧಿಕಾರಿ ಆಗಿರುತ್ತಾರೆ. 30 ದಿನಗಳೊಳಗೆ ಜನನ, ಮರಣ ಪ್ರಕರಣಗಳಲ್ಲಿ ನೋಂದಣಿ ಮಾಡಿ, ಪ್ರಮಾಣ ಪತ್ರವನ್ನು ಸಾರ್ವಜನಿಕರಿಗೆ ನೀಡಲು ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ, ನಗರಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು, ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿ ಆಗಿರುತ್ತಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಸಂಸ್ಥೆಯ ವೈದ್ಯಾಧಿಕಾರಿಗಳು ಉಪ ನೋಂದಣಾಧಿಕಾರಿ ಆಗಿರುತ್ತಾರೆ. ನಗರ, ಪಟ್ಟಣ ಪ್ರದೇಶದಲ್ಲಿನ ಖಾಸಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಜನನ, ಮರಣ ಪ್ರಕರಣಗಳಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡಿ, ದಾಖಲೆಗಳನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಉಪವಿಭಾಗಾಧಿಕಾರಿ ಅಭಿಷೇಕ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ ಎಸ್. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

- - -

ಬಾಕ್ಸ್‌ * ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಲು ಸೂಚನೆ ಕೆಲವು ಆಸ್ಪತ್ರೆಗಳಲ್ಲಿ ಜನನ ಮತ್ತು ಮರಣ ಪ್ರಕರಣಗಳಲ್ಲಿ ಒಂದಕ್ಕೊಂದು ದಾಖಲೆಗಳು ತಾಳೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯದಲ್ಲಿ ಅನಾವಶ್ಯಕ ಪ್ರಕರಣಗಳು ದಾಖಲಾಗುತ್ತಿವೆ. ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನನ ಮತ್ತು ಮರಣ ಅಂಕಿ ಅಂಶಗಳ ದಾಖಲೆಗಳನ್ನು ಸರಿಯಾಗಿ ಸ್ಥಳೀಯ ಸಂಸ್ಥೆಗೆ ಸಲ್ಲಿಸದ ಕಾರಣ ಇ-ಜನ್ಮ ತಂತ್ರಾಂಶದಲ್ಲಿ ಹೆಸರಿದ್ದರೆ, ಅದರ ದಾಖಲೆಗಳು ಲಭ್ಯ ಇರುವುದಿಲ್ಲ. ಹೆಸರು ಮತ್ತು ಅವರ ಇತರೆ ದಾಖಲೆಗಳಿಗೆ ತಾಳೆ ಆಗದಿರುವುದರಿಂದ ತಿದ್ದುಪಡಿ ಮಾಡಲು ನ್ಯಾಯಾಲದಲ್ಲಿ ಆದೇಶ ಪಡೆಯಬೇಕಾಗುತ್ತದೆ. ತಿದ್ದುಪಡಿ ಪ್ರಕರಣಗಳು ಹೆಚ್ಚಿರುವುದರಿಂದ ನಗರಸಭೆಯಿಂದ ನ್ಯಾಯಾಲಯದ ಪ್ರತಿನಿಧಿಯಾಗಿ ವಕೀಲರು ಹಾಜರಾಗುವುದರಿಂದ ಅವರಿಗೆ ಪ್ರಕರಣಗಳ ಆಧಾರದಲ್ಲಿ ಗೌರವಧನ ಪಾವತಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗೆ ಹೊರೆಯಾಗುವ ಜೊತೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಯವರು ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ ಅವರು, ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲು ತಿಳಿಸಿದರು. ಎಲ್ಲ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಲು ಸೂಚನೆ ನೀಡಿದರು.

- - -

-17ಕೆಡಿವಿಜಿ33ಃ:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆ ನಡೆಯಿತು.