ಕುಂದುವಾಡ ಕೆರೆ ಹೆಸರಲ್ಲಿ ಸಂಸದರಿಂದ ₹16 ಕೋಟಿ ಲೂಟಿ

| Published : May 02 2024, 12:21 AM IST

ಸಾರಾಂಶ

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಕುಂದವಾಡ ಕೆರೆ ದುರಸ್ತಿ ಎಂಬ ನೆಪವೊಡ್ಡಿ ಸುಮಾರು ₹16 ಕೋಟಿ ಖರ್ಚಿನ ಲೆಕ್ಕ ತೋರಿಸಿ, ಅಷ್ಟು ಅನುದಾನ ಲೂಟಿ ಮಾಡಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಆರೋಪಿಸಿದರು.

- ಜಿಲೇಬಿ ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ ಆರೋಪ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಕುಂದವಾಡ ಕೆರೆ ದುರಸ್ತಿ ಎಂಬ ನೆಪವೊಡ್ಡಿ ಸುಮಾರು ₹16 ಕೋಟಿ ಖರ್ಚಿನ ಲೆಕ್ಕ ತೋರಿಸಿ, ಅಷ್ಟು ಅನುದಾನ ಲೂಟಿ ಮಾಡಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಆರೋಪಿಸಿದರು.

ಬುಧವಾರ ಕುಂದುವಾಡ ಕೆರೆ ಏರಿ ಮೇಲೆ ಸಂಸದ ಜಿ.ಎಂ. ಸಿದ್ದೇಶ್ವರ್ ಭ್ರಷ್ಟಾಚಾರವನ್ನು ಖಂಡಿಸಿ ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲೇಬಿ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.

ದಾವಣಗೆರೆ ನಗರಸಭೆ ಆಡಳಿತವಿದ್ದಾಗ ನೀರಿನ ಅವ್ಯವಸ್ಥೆ ಉಂಟಾಗಿತ್ತು. ಆಗ ನಗರದ ಜನರು ಹರಿಹರಕ್ಕೆ ಹೋಗಿ ನೀರು ತರುತ್ತಿದ್ದರು. ಇದನ್ನು ಗಮನಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕೊಳಚೆ ನೀರಿನ ಗುಂಡಿಯಾಗಿದ್ದ ಸುಮಾರು 236 ಎಕರೆ ವಿಸ್ತೀರ್ಣದ ಕುಂದವಾಡ ಕೆರೆಯನ್ನು ಕೇವಲ ₹2.50 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಿಸಿ, ನೀರಿನ ಶುದ್ಧೀಕರಣ ಘಟಕ, ನೀರು ಸಂಗ್ರಹ ಹಾಗೂ ವಿತರಣಾ ವ್ಯವಸ್ಥೆ ಕೈಗೊಂಡಿದ್ದರು ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರಿಗೆ ಅಭಿವೃದ್ಧಿ ವಿಷಯದಲ್ಲಿ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ. ಮಲ್ಲಿಕಾರ್ಜುನ್ ಅವರ ಬಳಿ ಚರ್ಚೆ ಬೇಡ. ನಾನೇ ಚರ್ಚೆಗೆ ಬರುತ್ತೇನೆ. ಚರ್ಚೆಗೆ ಬರುವ ಮುನ್ನ ದಾವಣಗೆರೆ ಜನರ ಬಳಿ ಹೋಗಿ ದಾವಣಗೆರೆಯಲ್ಲಿ ಯಾರು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಿ ಬರಲಿ. ಸಂಸದ ಜಿ.ಎಂ.ಸಿದ್ದೇಶ್ವರ್ ದಾವಣಗೆರೆ ಸಂಸದರಾಗಿ ಅಭಿವೃದ್ಧಿ ಕೆಲಸ ಮಾಡಿರುವುದಕ್ಕಿಂತ ಲೂಟಿ ಮಾಡಿರುವುದೇ ಹೆಚ್ಚು ಎಂದು ಆರೋಪಿಸಿದರು.

ಮಹಿಳಾ ಕಾಂಗ್ರೆಸ್‌ನ ಮಂಗಳಮ್ಮ, ಮಂಜಮ್ಮ, ಕವಿತಾ, ಸುಷ್ಮಾ ಪಾಟೀಲ್, ಉಮಾಕುಮಾರ್, ಕಾವ್ಯ, ಸಲ್ಮಾಬಾನು, ಕಮಲಮ್ಮ, ರುದ್ರಮ್ಮ, ದಿಲ್ ಶಾದ್, ಸುಧಾ, ಗೀತಾ, ಸುನೀತಾ, ಶಿಲ್ಪ, ಕಾವೇರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಹಲವರಿದ್ದರು.

- - - -1ಕೆಡಿವಿಜಿ37ಃ:

ಸಂಸದ ಜಿ.ಎಂ. ಸಿದ್ದೇಶ್ವರ್ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ, ದಾವಣಗೆರೆ ಕುಂದುವಾಡ ಕೆರೆ ಏರಿ ಮೇಲೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲೇಬಿ ತಯಾರಿಸಿ, ಪ್ರತಿಭಟನೆ ನಡೆಸಲಾಯಿತು.