ಚಿನ್ನಾಭರಣ ಶೋ ರೂಂನಲ್ಲಿ ಹಾಡಹಗಲೇ ದರೋಡೆಕೋರರು ಸಿಬ್ಬಂದಿಗೆ ಗನ್ ತೋರಿಸಿ 5- 6 ಕೆ.ಜಿ. ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ದರೋಡೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ ಬೈಪಾಸ್ ರಸ್ತೆಯಲ್ಲಿನ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹುಣಸೂರು
ಚಿನ್ನಾಭರಣ ಶೋ ರೂಂನಲ್ಲಿ ಹಾಡಹಗಲೇ ದರೋಡೆಕೋರರು ಸಿಬ್ಬಂದಿಗೆ ಗನ್ ತೋರಿಸಿ 5- 6 ಕೆ.ಜಿ. ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ದರೋಡೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ ಬೈಪಾಸ್ ರಸ್ತೆಯಲ್ಲಿನ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನಲ್ಲಿ ನಡೆದಿದೆ.ಭಾನುವಾರ ಮಧ್ಯಾಹ್ನ 12.30ಕ್ಕೆ 2 ಬೈಕ್ನಲ್ಲಿ ಆಗಮಿಸಿದ ಐವರು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ಗನ್ ಇತ್ತು. ಒಬ್ಬ ಹೆಲ್ಮೆಟ್ ಧರಿಸಿದ್ದರೆ, ಮಿಕ್ಕವರು ಮಳಿಗೆಯೊಳಗೆ ಬಂದ ನಂತರ ಮಾಸ್ಕ್ ಧರಿಸಿದ್ದರು.
ಮಳಿಗೆಯ ವ್ಯವಸ್ಥಾಪಕ ಅಜ್ಗರ್ ಊಟಕ್ಕೆ ತೆರಳಿದ್ದ ವೇಳೆ ಆಗಮಿಸಿದ ದರೋಡೆಕೋರರು, ಮಳಿಗೆಯಲ್ಲಿ ಚಿನ್ನ ಖರೀದಿಸುತ್ತಿದ್ದ ಗ್ರಾಹಕರನ್ನು ಸುಮ್ಮನೆ ಕೂರಲು ತಿಳಿಸಿದರು. ನಂತರ, ಕರ್ತವ್ಯದಲ್ಲಿದ್ದ ಎಲ್ಲಾ 18 ಸಿಬ್ಬಂದಿಗೆ ಹ್ಯಾಂಡ್ಸ್ ಅಪ್ ಮಾಡಿಸಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ. ದರೋಡೆಕೋರರು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ಕ್ಷಣಮಾತ್ರದಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡ ದರೋಡೆಕೋರರು ಮಳಿಗೆಯಿಂದ ತೆರಳಿದ್ದಾರೆ. ತೆರಳುವಾಗ ಒಬ್ಬ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾನೆ. ಎರಡೂ ಬೈಕುಗಳು ಮೈಸೂರು ರಸ್ತೆ ಕಡೆ ತೆರಳಿದವು ಎನ್ನಲಾಗಿದೆ.ಬಸ್ ನಿಲ್ದಾಣದ ಮುಂಭಾಗವೇ ದರೋಡೆ:
ಮೈಸೂರು-ಮಡಿಕೇರಿಯ ಹೆದ್ದಾರಿ ಬೈಪಾಸ್ ಇದಾಗಿದ್ದು, ಬೈಪಾಸ್ ರಸ್ತೆಯ ಮೂಲಕ ಬಸ್ ನಿಲ್ದಾಣ ಪ್ರವೇಶಿಸುವ ಮುಖ್ಯದ್ವಾರದ ಬಳಿಯೇ ಮಳಿಗೆ ಇದೆ. ತಿಂಗಳ ಕೊನೆಯ ಭಾನುವಾರ ಹುಣಸೂರು ದಿನಸಿ ಅಂಗಡಿಗಳು ಬಂದ್ ಆಗಿರುತ್ತವೆ. ಜನ ಓಡಾಟವೂ ಕಡಿಮೆ ಇತ್ತು. ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಿತ್ತು. ಈ ಎಲ್ಲಾ ವಿಷಯಗಳನ್ನು ಗಮನಿಸಿರುವ ದರೋಡೆಕೋರರು, ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ದರೋಡೆಕೋರರ ಪತ್ತೆಗಾಗಿ 5 ತಂಡಗಳನ್ನು ರಚಿಸಲಾಗಿದೆ ಎಂದು ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.