ಸಾರಾಂಶ
ಎಸ್ಸೆಸ್ಲೆಲ್ಸಿ ವಾರ್ಷಿಕ ಪರೀಕ್ಷೆಗೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದಿಂದ ಒಟ್ಟು 2,41,150 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ತಿಳಿಸಿದ್ದಾರೆ.
ಧಾರವಾಡ: ಮಾರ್ಚ್ 21ರಿಂದ ಆರಂಭಗೊಳ್ಳುವ ಎಸ್ಸೆಸ್ಲೆಲ್ಸಿ ವಾರ್ಷಿಕ ಪರೀಕ್ಷೆಗೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಒಂಭತ್ತು ಜಿಲ್ಲೆಗಳಿಂದ ಒಟ್ಟು 2,41,150 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಈ ಪೈಕಿ 1,22,598 ಬಾಲಕರು ಹಾಗೂ 1,18,552 ಬಾಲಕಿಯರಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತರಾದ ಜಯಶ್ರೀ ಶಿಂತ್ರಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಕಿತ್ತೂರು ಕರ್ನಾಟಕ ಭಾಗದ 9 ಜಿಲ್ಲೆಗಳಲ್ಲಿ 1449 ಸರ್ಕಾರಿ, 1217 ಅನುದಾನಿತ ಹಾಗೂ 1205 ಅನುದಾನ ರಹಿತ ಪ್ರೌಢ ಶಾಲೆಗಳು ಸೇರಿ ಒಟ್ಟು 3871 ಶಾಲೆಗಳಲ್ಲಿ 2024-25ರಲ್ಲಿ ಒಟ್ಟು 2,54.965 ವಿದ್ಯಾರ್ಥಿಗಳು ಎಸ್ಸೆಸ್ಲೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ವಿಜಯಪುರ-40626 , ಬಾಗಲಕೋಟ-33209 , ಬೆಳಗಾವಿ-33072 , ಧಾರವಾಡ-28666 , ಗದಗ-16458 , ಹಾವೇರಿ-24736 , ಉತ್ತರಕನ್ನಡ -9180 , ಶೈಕ್ಷಣಿಕ ಜಿಲ್ಲೆಗಳಾದ ಶಿರಸಿಯಲ್ಲಿ 9963 ಮತ್ತು ಚಿಕ್ಕೋಡಿಯಲ್ಲಿ 45240 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಗೆ ನೋಂದಾಯಿಸಿದ್ದಾರೆ.ಪರೀಕ್ಷಾ ಕೇಂದ್ರಗಳು
ಒಂಭತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 773 ಪರೀಕ್ಷಾ ಕೇಂದ್ರಗಳಿವೆ. ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರಗಳ ಅಧೀಕ್ಷಕರು, ವಿವಿಧ ಅಧಿಕಾರಿಗಳು ಸೇರಿ ಒಟ್ಟು 15486 ಸಿಬ್ಬಂದಿಯನ್ನು ಸುಗಮ ಪರೀಕ್ಷಾ ಸಂಘಟನೆಗೆ ನಿಯೋಜಿಸಲಾಗಿದೆ. ಒಟ್ಟು 156 ಅಧಿಕಾರಿಗಳನ್ನು ಒಳಗೊಂಡ 52 ವಿಚಕ್ಷಕ ದಳಗಳನ್ನು ರಚಿಸಲಾಗಿದ್ದು ಇವರು ನಿರಂತರವಾಗಿ ಪರೀಕ್ಷಾ ಕೇಂದ್ರಗಳಿಗೆ ಸಂದರ್ಶನ ನೀಡಿ ಪರಿಶೀಲಿಸಲಿದ್ದಾರೆ. ಈ ಪರೀಕ್ಷೆಗೆಂದೇ ಒಟ್ಟು 400 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 45240 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇಲ್ಲಿ 130 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 9180 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇಲ್ಲಿ 37 ಪರೀಕ್ಷಾ ಕೇಂದ್ರಗಳಿವೆ ಎಂದೂ ಜಯಶ್ರೀ ಶಿಂತ್ರಿ ಮಾಹಿತಿ ನೀಡಿದ್ದಾರೆ.ವೆಬ್ ಕಾಸ್ಟಿಂಗ್ ಜಾಲಬಂಧ
ಸರ್ಕಾರದ ಆದೇಶದಂತೆ ರಾಜ್ಯದೆಲ್ಲೆಡೆ ‘ವೆಬ್ ಕಾಸ್ಟಿಂಗ್ ಜಾಲಬಂಧ’ ರಚಿಸಲಾಗಿದೆ. ವಿಭಾಗದ 9 ಜಿಲ್ಲೆಗಳ 773 ಪರೀಕ್ಷಾ ಕೇಂದ್ರಗಳನ್ನು ‘ವೆಬ್ ಕಾಸ್ಟಿಂಗ್ ಜಾಲಬಂಧ’ಕ್ಕೆ ಅಳವಡಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿಯ ವಿದ್ಯಮಾನಗಳ ಮೇಲೆ ಜಿಲ್ಲಾ ಮಟ್ಟದ ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರಗಳ ಸಿಬ್ಬಂದಿ ನಿರಂತರ ನಿಗಾವಹಿಸಿರುತ್ತಾರೆ. ಇಲಾಖೆಯ ಎಲ್ಲ ಹಂತಗಳ ಅಧಿಕಾರಿಗಳು ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವಂತೆ ತಿಳಿವಳಿಕೆ ನೀಡಿದ್ದಾರೆ. ಪರೀಕ್ಷಾ ಅಕ್ರಮಗಳು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.