ಸಾರಾಂಶ
ಕಾಡಾನೆ ದಾಳಿಗೆ ೨ ಸಾವಿರ ಬಾಳೆ, ೬೦ ತೆಂಗಿನ ಸಸಿ ನಾಶ । ಓಂಕಾರದಲ್ಲಿ ನಿಲ್ಲದ ಕಾಡಾನೆಗಳ ದಾಳಿ । ಕಾಡಾನೆಗಳ ಹಾವಳಿ ತಡೆಗೆ ರೈತರ ಆಗ್ರಹ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆನಾಲ್ಕು ಕಾಡಾನೆಗಳ ದಾಳಿಗೆ ೨ ಸಾವಿರ ಬಾಳೆಗಿಡ,೬೦ ತೆಂಗಿನ ಸಸಿಗಳು ನಾಶವಾಗಿದ್ದು, ಲಕ್ಷಾಂತರ ರು. ಮೌಲ್ಯದ ಫಸಲು ನಷ್ಟವಾಗಿರುವ ಘಟನೆ ತಾಲೂಕಿನ ಕುರುಬರಹುಂಡಿ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗು ರೈತ ಕೆ.ಎಂ.ಮಹದೇವಸ್ವಾಮಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬಾಳೆ ತೋಟಕ್ಕೆ ನುಗ್ಗಿದ ನಾಲ್ಕು ಕಾಡಾನೆಗಳು ಸುಮಾರು ೨ ಸಾವಿರದಷ್ಟು ಬಾಳೆ ಕಟ್ಟೆಯನ್ನು ತುಳಿದು ಹಾಕಿವೆ.ಬಾಳೆಕಟ್ಟೆ ನೆಲಸಮ ಮಾಡಿರುವ ಜೊತೆಗೆ ಬಾಳೆ ತೋಟದೊಳಗಿದ್ದ ಸುಮಾರು ೬೦ ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಬುಡ ಸಮೇತ ಕಿತ್ತು ಹಾಕಿವೆ. ಕಾಡಾನೆಗಳ ದಾಳಿಗೆ ರೈತರು ಕಂಗಾಲಾಗಿದ್ದಾರೆ.
ಸಚಿವರ ಸೂಚನೆಅರಣ್ಯ ಸಚಿವ ಈಶ್ವರ್ ಖಂಡ್ರೆ ಜಂಗಲ್ ಲಾಡ್ಜ್ನಲ್ಲಿರುವ ವಿಷಯ ಅರಿತ ರೈತ ಕೆ.ಎಂ.ಮಹದೇವಸ್ವಾಮಿ ಭೇಟಿ ಮಾಡಿ, ಕಾಡಾನೆಗಳ ದಾಳಿಗೆ ೨ ಸಾವಿರ ಬಾಳೆ ಕಟ್ಟೆ, ೬೦ ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನಾಶವಾಗಿವೆ ಎಂದು ಫೋಟೋ ತೋರಿಸಿದಾಗ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ಪರಿಹಾರ ವಿತರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರ ಸೂಚನೆಯ ಬೆನ್ನಲ್ಲೇ ಎಸಿಎಫ್ ಜಿ.ರವೀಂದ್ರ, ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಕಾಡಾನೆಗಳು ದಾಳಿ ನಡೆಸಿದ ರೈತರ ಜಮೀನಿಗೆ ಭೇಟಿ ನೀಡಿ ಮಹಜರು ನಡೆಸಿದರು.ಕಾಡಾನೆಗಳ ಹಾವಳಿ ಓಂಕಾರ ವಲಯದಂಚಿನ ಗ್ರಾಮಗಳಲ್ಲಿ ಹೆಚ್ಚಾಗಿದೆ. ಆನೆಗಳ ದಾಳಿ ತಡೆಗೆ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ನನ್ನ ಜಮೀನಿನಲ್ಲಿನ ಬಾಳೆ ಕಟ್ಟೆ ಹಾಗೂ ತೆಂಗಿನ ಸಸಿಗಳನ್ನು ನಾಶಗೊಳಿಸಿದ್ದು ಬಹಳ ನೋವಾಗಿದೆ.
-ಕೆ.ಎಂ.ಮಹದೇವಸ್ವಾಮಿ,ರೈತ,ಕುರುಬರಹುಂಡಿ