ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವವನ್ನು ಏ.21 ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಮಧ್ಯವರ್ತಿ ಉತ್ಸವ ಸಮಿತಿ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಬೆಳಗಾವಿಯಲ್ಲಿ ದಿಗಂಬರ ಮತ್ತು ಶ್ವೇತಾಂಬರ ಜೈನ ಸಮಾಜದವರು ಒಂದಾಗಿ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಆಚರಿಸುತ್ತ ಬಂದಿದ್ದಾರೆ. ಜನ್ಮ ಕಲ್ಯಾಣಕ ಮಹೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏ.15 ರಂದು ಬೆಳಗ್ಗೆ 9 ಗಂಟೆಗೆ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಏ.16 ರಂದು ಮಹಾವೀರ ಭವನದಲ್ಲಿ ಬೆಳಗ್ಗೆ 10 ರಿಂದ ಮಧಾಹ್ನ 1 ಗಂಟೆಯವರೆಗೆ ಅರ್ಹಂ ವಿಜ್ಜಾ ಅಹಮದ್ ನಗರ ಮತ್ತು ಬೆಂಗಳೂರು ಅವರಿಂದ ಜೀವನ ಶೈಲಿ ಕುರಿತು ತರಬೇತಿ ಕಾರ್ಯಾಗಾರ ಸಂಜೆ 4 ಗಂಟೆಗೆ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಏ.17 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಹಾವೀರ ಭವನದಲ್ಲಿ ವಸ್ತು ಪ್ರದರ್ಶನ, ಉದ್ಯೋಗಸ್ಥ ಮಹಿಳೆಯರಿಗಾಗಿ ವ್ಯಾಪಾರ ಮಳಿಗೆ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ. ಅಂದು ಸಂಜೆ ಮಹಿಳೆಯರಿಗಾಗಿ ಗುಂಪು ಭಜನೆ, ಕಲರ್ಸ್ ಆಫ್ ಇಂಡಿಯಾ ಗ್ರುಪ್ ನೃತ್ಯ, ಪಾಕಕಲಾ ಸ್ಪರ್ಧೆ, ಸೀರೆ ವಿನ್ಯಾಸಗಳ ಸ್ಫರ್ಧೆ, ಮಕ್ಕಳಿಗಾಗಿ ಕಸದಿಂದ ರಸ ಸ್ಪರ್ಧೆ, ಸೂಪರ ಹೀರೋ ಸ್ಫರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.ಏ.18 ರಂದು ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಮಕ್ಕಳ ಜಿನ ಭಜನಾ ಸ್ಪರ್ಧೆ, ಮಹಿಳೆಯರಿಗೆ ನೃತ್ಯ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ. ಏ.19 ರಂದು ಸಂಜೆ 6 ರಿಂದ 9 ಗಂಟೆಯವರೆಗೆ ಬ್ರಾಹ್ಮಿ ಇಂದ ಗೊಮ್ಮಟನವರೆಗೆ ನಾಟಕ ನಡೆಯಲಿದೆ ಎಂದು ಮಾಹಿತಿ ನೀಡಿದರು.
|ಏ.21 ರಂದು ಶೋಭಾಯಾತ್ರೆ ನಡೆಯಲಿದೆ. ಅಂದು ಬೆಳಗ್ಗೆ 8.05 ಗಂಟೆಗೆ ಜೈನ ಯುವ ಸಂಘಟನೆ ವತಿಯಿಂದ ಬೃಹತ್ ಬೈಕ ರ್ಯಾಲಿ ನಡೆಸಲಾಗುವುದು. ತದನಂತರ ಸಮಾದೇವಿ ಗಲ್ಲಿ ಖಡೆಬಜಾರದಿಂದ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಸಮಾರಂಭಕ್ಕೆ ಮುಖ್ಯ ಅತಥಿಯಾಗಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹಾಗೂ ಗೌರವ ಅತಿಥಿ ಪದ್ಮಶ್ರೀ ಪ್ರೊ.ಡಾ.ಮದನ ಎಂ.ಗೋಡಬೊಲೆ ಆಗಮಿಸಲಿದ್ದಾರೆ ಎಂದರು.ಗೋಷ್ಠಿಯಲ್ಲಿ ವಿನೋದ ದೊಡ್ಡಣ್ಣವರ, ರಾಜೇಂದ್ರ ಜಕ್ಕನ್ನವರ, ಸಾಗರ ಬೋರಗಲ್ಲ, ರಾಜು ಖೋಡಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಕೋಟ್..ಶೋಭಾಯಾತ್ರೆ ರಾಮದೇವ ಗಲ್ಲಿ, ರಾಮಲಿಂಗಖಿಂಡ ಗಲ್ಲಿ, ಟಿಳಕಚೌಕ್, ಶೇರಿ ಗಲ್ಲಿ, ಶನಿ ಮಂದಿರ, ಎಸ್.ಪಿ.ಎಂ ರೋಡ್, ಕೋರೆ ಗಲ್ಲಿ ಶಹಾಪೂರ ಹಾಗೂ ಬಸವೇಶ್ವರ ವೃತ್ತದ ಮೂಲಕ ಮಹಾವೀರ ಭವನ ತಲುಪಿ ಶೋಭಾಯಾತ್ರೆ ಮುಕ್ತಾಯಗೊಳ್ಳುವುದು. ಮಹಾವೀರ ಭವನದಲ್ಲಿ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುತ್ತದೆ.
ರಾಜೇಂದ್ರ ಜೈನ, ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಮಧ್ಯವರ್ತಿ ಉತ್ಸವ ಸಮಿತಿ ಗೌರವ ಕಾರ್ಯದರ್ಶಿ.