ನಗರಯೋಜನಾ ಪ್ರಾಧಿಕಾರ ಮತ್ತು ನಗರಸಭೆ ಸಹಯೋಗದಲ್ಲಿ ೨೬೪ ಅಡಿ ಎತ್ತರದ ರಾಷ್ಟ್ರಧ್ವಜವೊಂದು ಪುತ್ತೂರಿನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಧ್ವಜ ಅಳವಡಿಕೆಗೆ ಧ್ವಜಸ್ತಂಭ ಅಳವಡಿಸುವ ಕಾರ್ಯ ಭಾನುವಾರ ನಡೆಯಿತು.
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವ ನಗರಯೋಜನಾ ಪ್ರಾಧಿಕಾರ ಮತ್ತು ನಗರಸಭೆ ಸಹಯೋಗದಲ್ಲಿ ೨೬೪ ಅಡಿ ಎತ್ತರದ ರಾಷ್ಟ್ರಧ್ವಜವೊಂದು ಪುತ್ತೂರಿನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಧ್ವಜ ಅಳವಡಿಕೆಗೆ ಧ್ವಜಸ್ತಂಭ ಅಳವಡಿಸುವ ಕಾರ್ಯ ಭಾನುವಾರ ನಡೆಯಿತು. ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪ ನೆಲ್ಲಿಕಟ್ಟೆ ಉದ್ಯಾನವನದಲ್ಲಿ ಧ್ವಜಸ್ತಂಭ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಅಡಿಪಾಯ ರಚನೆ ಪೂರ್ಣಗೊಂಡು ಭಾನುವಾರ ಕ್ರೇನ್ ಸಹಾಯದಿಂದ ಧ್ವಜಸ್ತಂಭವನ್ನು ಅಳವಡಿಸಲಾಯಿತು. ಬೆಳಗ್ಗೆ ಧ್ವಜಸ್ತಂಭ ನಿರ್ಮಾಣ ಜಾಗದಲ್ಲಿ ಪೂಜೆ, ಪ್ರಾರ್ಥನೆ ನಡೆಸಲಾಯಿತು. ಬಳಿಕ ಸ್ತಂಭವನ್ನು ನಿಲ್ಲಿಸಿ ಅಡಿಪಾಯ ಪೀಠಕ್ಕೆ ಜೋಡಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ, ನಗರಸಭೆ ಪೌರಾಯುಕ್ತೆ ವಿದ್ಯಾ ಕಾಳೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ನಿಹಾಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.ಮೂರನೇ ಅತೀ ಎತ್ತರದ ಸ್ತಂಭಈ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಅಶೋಕ್ ರೈ, ಇಡೀ ರಾಜ್ಯದಲ್ಲಿ ಮೂರನೇ ಅತಿ ಎತ್ತರದ ರಾಷ್ಟ್ರ ಧ್ವಜ ಇದಾಗಲಿದೆ. ತಾಲೂಕು ಕೇಂದ್ರವೊಂದರಲ್ಲಿ ನಿರ್ಮಾಣವಾಗುವ ಅತೀ ಎತ್ತರದ ರಾಷ್ಟ್ರ ಧ್ವಜ ಇದಾಗಲಿದೆ. ಸ್ತಂಭ ನಿಲ್ಲಿಸುವ ಕಾರ್ಯ ಪೂರ್ಣಗೊಂಡಿದೆ. ಮುಂದೆ ಇದಕ್ಕೆ ಲೈಟಿಂಗ್ ಮತ್ತು ಇತರ ಮೂಲ ಸೌಕರ್ಯಗಳನ್ನು ಮಾಡಲಾಗುವುದು. ಮುಂದಿನ ಒಂದು ವಾರದ ಬಳಿಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಒಂದು ಕೋಟಿ ವೆಚ್ಚದಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಇದಕ್ಕೆ ೨೪೦೦ ಅಡಿ ಎತ್ತರದ ಧ್ವಜವನ್ನು ಅಳವಡಿಕೆ ಮಾಡಲಾಗುವುದು. ವರ್ಷಕ್ಕೆ ೩ ಬಾರಿ ಧ್ವಜ ಬದಲಾಯಿಸಲಾಗುವುದು. ನಗರಸಭೆ ನಿರ್ವಹಣೆ ಮಾಡಲಿದೆ. ಈ ರಾಷ್ಟ್ರ ಧ್ವಜ ಸದಾ ನಮ್ಮೊಳಗಿನ ದೇಶ ಭಕ್ತಿಯನ್ನು ಉದ್ದೀಪನಗೊಳಿಸಲಿದೆ ಎಂದು ತಿಳಿಸಿದ್ದಾರೆ.