ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕ್ರಿಯಾಶೀಲ ತಾರೆಯರ ಟ್ರಸ್ಟ್ ಶಿವಮೊಗ್ಗ, ಅಲಿಜಿಯಯನ್ ಸಂಸ್ಥೆ ಮತ್ತು ಆರ್.ಕೆ. ಫೌಂಡೇಷನ್ ಬೆಂಗಳೂರು ಸಹಯೋಗದಲ್ಲಿ ಭಾನುವಾರ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್, ತಟ್ಟೆ, ನೀರಿನ ಬಾಟಲಿಗಳನ್ನು ನೀಡಲಾಯಿತು.

ಕ್ರಿಯಾಶೀಲ ತಾರೆಯರ ಟ್ರಸ್ಟ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 107 ಸರ್ಕಾರಿ ಶಾಲೆಗಳಿಗೆ ಸುಮಾರು ₹10 ಲಕ್ಷಕ್ಕೂ ಹೆಚ್ಚು ಮೌಲ್ಯದ 25 ಸಾವಿರ ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಗುತ್ಯಪ್ಪ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಮತ್ತು ಮಕ್ಕಳಿಗೆ ಕಲಿಕೆಯ ಕಿಟ್ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಂಶುಪಾಲ ಕೃಷ್ಣಮೂರ್ತಿ ಎಚ್.ಆರ್. ಶಿಕ್ಷಣವೇ ಶಕ್ತಿ, ಸರ್ಕಾರಿ ಶಾಲೆಗಳು ಇಂದು ಉಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ತಾರೆಯರ ತಂಡ ಪ್ರತಿ ವರ್ಷ ದಾನಿಗಳ ಸಹಾಯದಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಪಾಠೋಪಕರಣ, ಪೀಠೋಕರಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಯುವ ಮುಖಂಡ ಎಚ್.ಸಿ. ಯೋಗೀಶ್ ಮಾತನಾಡಿ, ಯಾವ ಸರ್ಕಾರಗಳು ಬಂದರೂ ಶಿಕ್ಷಣಕ್ಕೆ ಮಹತ್ವ ನೀಡುತ್ತಲೇ ಬಂದಿವೆ. ಶಿಕ್ಷಣ ಸಚಿವರಾಗಿದ್ದ ಮಧು ಬಂಗಾರಪ್ಪ ಅವರು ಹಲವು ಸುಧಾರಣೆ ತಂದಿದ್ದಾರೆ. ಸರ್ಕಾರದ ಜೊತೆಗೆ ಇಂತಹ ಉದಾರ ಸಂಘ ಸಂಸ್ಥೆಗಳು ಕೈ ಜೋಡಿಸುವುದರಿಂದ ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುತ್ತದೆ ಎಂದರು.


ನೋಟ್ ಬುಕ್ ನೆರವು ನೀಡಿದ ಆರ್‌.ಕೆ. ಫೌಂಡೇಷನ್ ಪ್ರತಿನಿಧಿ ನಾರಾಯಣ್ ಮಾತನಾಡಿ, ನಮ್ಮ ಫೌಂಡೇಷನ್ ಸರ್ಕಾರಿ ಶಾಲೆಗಳ ಉಳಿವಿಗಾಗಿ ಕಳೆದ ಹಲವು ವರ್ಷಗಳಿಂದ ನೆರವು ನೀಡುತ್ತಲೇ ಬಂದಿದೆ. ಇಡೀ ರಾಜ್ಯದಲ್ಲಿ ಈ ರೀತಿಯ ನೆರವು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಶಿವಮೊಗ್ಗದ ಕ್ರಿಯಾಶೀಲ ತಾರೆಯರ ತಂಡವು ಈ ನೆರವನ್ನು ಸಮರ್ಪಕವಾಗಿ ತಲುಪಿಸುತ್ತಿದೆ. ಹಿಂದುಳಿದ ಸೌಲಭ್ಯಗಳು ಇಲ್ಲದ ಸರ್ಕಾರಿ ಶಾಲೆಗಳಿಗೆ ನಮ್ಮ ಕೊಡುಗೆಗಳು ಹೆಚ್ಚಾಗಿ ತಲುಪಬೇಕು ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಮಾತನಾಡಿ, ಇದೊಂದು ಅತ್ಯುತ್ತಮವಾದ ಕೆಲಸ, ಕೊರೋನಾದಂತಹ ಸಂದಿಗ್ಧ ಸಮಯದಲ್ಲಿ ಹುಟ್ಟಿಕೊಂಡ ನಲಿಕಲಿ ಕ್ರಿಯಾಶೀಲ ತಾರೆಯರ ತಂಡ ಇಂದು ಸರ್ಕಾರಿ ಶಾಲೆಗಳ ಉಳಿವಿಗಾಗಿ ಶ್ರಮ ಪಡುತ್ತಿರುವುದು ಅತ್ಯಂತ ಶ್ಲಾಘನೀಯ. ಸರ್ಕಾರಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಪ್ರತಿಭೆಗಳು ಕೂಡ ಅನಾವರಣಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕಲೀಂ ಪಾಷಾ, ಅಲ್ಜಿಯನ್ ಸಂಸ್ಥೆಯ ರಮೇಶ್, ಅಭಿಷೇಕ್, ಎನ್ಇಎಸ್ ಕಾಲೇಜ್ ಪ್ರಾಂಶುಪಾಲ ರವಿಕುಮಾರ್, ಪ್ರಭಾರ ಬಿಇಒ ಪಂಚಾಕ್ಷರಿ, ವೃಕ್ಷ ಸ್ವಸಹಾಯ ಸಂಘದ ಮೊಹಮ್ಮದ ಜಫ್ರುಲ್ಲಾ ಸೇರಿದಂತೆ ಹಲವರಿದ್ದರು.

ಕ್ರಿಯಾಶೀಲ ತಾರೆಯರ ಟ್ರಸ್ಟ್ ಅಧ್ಯಕ್ಷೆ ಫೌಜಿಯಾ ಸರಾವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ಭಾಗೀರಥಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುನಂದಾ ಸ್ವಾಗತಿಸಿ, ವಾಣಿ ಪಟೇಲ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳನ್ನು ಅಭಿನಂದಿಸಲಾಯಿತು. ವೃಕ್ಷ ಸ್ವಸಹಾಯ ಸಂಘದವರು ಗಿಡಗಳನ್ನು ವಿತರಿಸಿದರು.

- - -

-05ಎಸ್‌ಎಂಜಿಕೆಪಿ04:

ಶಿವಮೊಗ್ಗದ ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ಗುತ್ಯಪ್ಪ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳಿಗೆ ಕಲಿಕೆಯ ಕಿಟ್ ನೀಡಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.