ಸಾರಾಂಶ
20 ದಿನಗಳಲ್ಲಿ 4,923 ಫಲಾನುಭವಿಗಳಿಗೆ 4 ಕೋಟಿ 3 ಲಕ್ಷ ಬೆಳೆ ಹಾನಿ ಪರಿಹಾರ
ಇಂದರಪಾಶ ಚಿಂಚರಕಿ
ಕನ್ನಡಪ್ರಭ ವಾರ್ತೆ ಮಸ್ಕಿಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಅಕಾಲಿಕ ಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ರೈತ ಸಮೂದಾಯದ ನೇರವಿಗೆ ಬಂದ ಸರ್ಕಾರ 20 ದಿನಗಳಲ್ಲಿ ರೈತರಿಗೆ 4 ಕೋಟಿ ರು. ಪರಿಹಾರ ಹಣ ಬಿಡುಗಡೆ ಮಾಡಿದ್ದು ರೈತರಲ್ಲಿ ಸಂತಸ ಮೂಡಿಸಿದೆ.
ತಾಲೂಕಿನ ವಿವಿದೆಡೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆ ಹಾಗೂ ಗಾಳಿಗೆ ರೈತರು ಸಾಲ ಮಾಡಿ ಬೆಳೆದಿದ್ದ ಭತ್ತದ ಬೆಳೆ ಕಟಾವಿನ ಹಂತಕ್ಕೆ ಬಂದಿದ್ದವು, ಆದರೆ ಗಾಳಿ ಮಳೆಗೆ ಭತ್ತ ನೆಲಕ್ಕೆ ಬಿದ್ದು ಲಕ್ಷಾಂತರ ರು. ನಷ್ಟ ಅನುಭವಿಸಿ ಇದರಿಂದ ಕಂಗಾಲಾಗಿದ್ದ ರೈತರಿಗೆ ರಾಜ್ಯ ಸರ್ಕಾರ ಜಂಟಿ ಸರ್ವೇ ಕಾರ್ಯನಡೆಸಿ ಬೆಳೆ ಕಳೆದುಕೊಂಡ 20 ದಿನಗಳಲ್ಲಿಯೇ ಪರಿಹಾರದ ಹಣ ರೈತರ ಖಾತೆಗೆ ಬಿಡುಗಡೆ ಮಾಡಿರುವುದರಿಂದ ರೈತರಿಗೆ ಸಾಲದಿಂದ ಚೇತರಿಸಿ ಕೊಳ್ಳುವಂತಾಗಿದೆ.*ಎಲ್ಲೇಲ್ಲಿ ಎಷ್ಟು ಬೆಳೆ ಹಾನಿ: ಮಸ್ಕಿ ತಾಲೂಕಿನ ಮಸ್ಕಿ ಹೋಬಳಿಯಲ್ಲಿ 43ಎಕರೆ, ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ 161 ಎಕರೆ , ಬಳಗಾನೂರು 1,396 ಎಕರೆ, ಗುಡದೂರು 1,648, ಹಾಲಾಪೂರು 3,178 ಸೇರಿ ಒಟ್ಟು 6,427 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ ಎಂದು ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಸರ್ಕಾರಕ್ಕೆ ಪರಿಹಾರ ಪಡೆಯಲು ಯೋಗ್ಯವಾಗಿದೆ ಎಂದು ವರದಿ ಸಲ್ಲಿಸಿದ್ದರು. ಅದರಂತೆ ಸರ್ಕಾರ ಇದೀಗ ಪರಿಹಾರವನ್ನು ರೈತರಿಗೆ ಸಕಾಲದಲ್ಲಿ ಬಿಡುಗಡೆ ಮಾಡುವ ಮೂಲಕ ರೈತರ ನೇರವಿಗೆ ದಾವಿಸಿದೆ.
*ಬೆಳೆ ಕಳೆದುಕೊಂಡ ರೈತರಲ್ಲಿ ಸಂತಸ: ಕಳೆದ ನವಂಬರ್ನಲ್ಲಿ ತಾಲೂಕಿನ ವಿವಿದೆಡೆ ಲಕ್ಷಾಂತರ ರು. ಸಾಲ ಮಾಡಿ ಬೆಳೆದಿದ್ದ ಭತ್ತ ಕಟಾವಿನ ಹಂತಕ್ಕೆ ತಲುಪಿದ್ದು, ಇನ್ನೇನು ಕಟಾವು ಮಾಡಿ ಲಾಭದ ಆಸೆಯಲಿದ್ದ ರೈತ ಸಮುದಾಯಕ್ಕೆ ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿ ಮತ್ತೆ ಸಾಲಕ್ಕೆ ಸಿಲುಕುವಂತಹ ಪರಿಸ್ಥಿತಿ ಬಂದೋದಗಿತ್ತು. ಸರ್ಕಾರ ತ್ವರಿತ ಗತಿಯಲ್ಲಿ ಪರಿಹಾರವನ್ನು ಬಿಡುಗಡೆ ಮಾಡಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.