ಪ್ರತಿಯೊಬ್ಬರು ಬದುಕನ್ನು ಹಾಗೂ ಬದುಕಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆ, ಕಾಯಿಲೆಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದು ಲೇಖಕ, ನಿರೂಪಕ ಡಾ. ನಾ. ಸೋಮೇಶ್ವರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿಯೊಬ್ಬರು ಬದುಕನ್ನು ಹಾಗೂ ಬದುಕಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆ, ಕಾಯಿಲೆಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದು ಲೇಖಕ, ನಿರೂಪಕ ಡಾ. ನಾ. ಸೋಮೇಶ್ವರ ಹೇಳಿದ್ದಾರೆ.ಭಾನುವಾರ ನಗರದ ಬಿ.ಪಿ. ವಾಡಿಯ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದ ‘ಸಾವನ್ನು ಎದುರಿಸುವುದು ಹೇಗೆ?’ ಸೇರಿದಂತೆ 24 ಲೇಖಕರ 27 ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮನಸ್ಥಿತಿಯಿಂದಾಗಿಯೇ ಕಾಯಿಲೆಗಳು ಮನುಷ್ಯರನ್ನು ಹಿಂಡುತ್ತಿವೆ. ಒಳ್ಳೆಯ ಬದುಕಿಗಿಂತ ಸಾವಿಗೆ ಹೆದರುವ ಪರಿಸ್ಥಿತಿ ಬಂದಿದೆ. ಬದುಕನ್ನು ಧರ್ಯೈವಾಗಿ ಎದುರಿಸಬಹುದು. ಬಹುತೇಕರು ಸಾವನ್ನು ಹೆದರಿಸುವುದನ್ನು ಕಲಿತಿಲ್ಲ. ಸಾವಿನ ಭಯದಲ್ಲಿ ಜೀವಿಸುವಂತಾಗಿದೆ ಎಂದರು.
ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೆನ್ ಜೀ ಗಳು ಸದ್ದು ಮಾಡುತ್ತಿದ್ದಾರೆ. ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ, ಜೆನ್ ಜೀ ಪರಿಕಲ್ಪನೆ ಈ ಹಿಂದೆಯು ಇತ್ತು. ಜೆನ್ ಜೀ ಆಲೋಚನೆಗಳು ಪ್ರತಿ ಕಾಲಘಟ್ಟದಲ್ಲೂ ಇರುತ್ತವೆ. ಹೋರಾಟದ ಜೊತೆಗೆ ಜೆನ್ ಜೀ ರಚನಾತ್ಮಕ ಸಲಹೆ ಸೂಚನೆಗಳನ್ನು ನೀಡಿದರೆ ಪ್ರತಿಭಟನೆಗಳು ಪ್ರಯೋಜನಕಾರಿಯಾಗುತ್ತವೆ ಎಂದರು.ಯುವ ಬರಹಗಾರರು ಬರವಣಿಗೆ ಕಡೆ ಆಸಕ್ತಿ ತೋರಿಸುತ್ತಿದ್ದು, ಹೆಚ್ಚೆಚ್ಚು ಬರೆಯುತ್ತಿದ್ದಾರೆ. ಯುವ ಸಮುದಾಯದಲ್ಲಿ ಓದು, ಬರಹ ಎರಡೂ ಇದೆ. ಹಾಗೆಯೇ ಓದುಗರ ಪ್ರೀತಿಗೆ ಸ್ಪಂದಿಸುವ ಪ್ರಾಮಾಣಿಕತೆ ಬರಹಗಾರರಿಗೆ ಇರಬೇಕು. ಸಾವಣ್ಣ ಪ್ರಕಾಶನದಿಂದ ಎಲ್ಲಾ ವರ್ಗಗಳ ಓದುಗರಿಗೆ ಇಷ್ಟವಾಗುವ ಪುಸ್ತಕಗಳು ಬರುತ್ತಿವೆ. ಓದುಗರು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ ಎಂದು ಗಿರೀಶ್ ರಾವ್ ಹತ್ವಾರ್ ಹೇಳಿದರು.ಚಿತ್ರ ನಿರ್ದೇಶಕ ಟಿ.ಎನ್ ಸೀತಾರಾಮ್ ಮಾತನಾಡಿ, ಈ ಕಾಲಘಟ್ಟದಲ್ಲಿ ಒಳ್ಳೆಯ ಪುಸ್ತಕಗಳು ಬರುತ್ತಿವೆ. ಓದುರಗನ್ನು ತಲುಪುತ್ತಿವೆ. ಲೇಖಕರು ಹೊಸ ರೀತಿಯಲ್ಲಿ ಬರೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಕಾರ್ಯಕ್ರಮದಲ್ಲಿ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಉಪಸ್ಥಿತರಿದ್ದರು.