ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರ ಟಿ.ನಾಸೀರ್ಗೆ ಸಹಕಾರ ನೀಡಿದ ಸಿಎಆರ್, ಎಎಸ್ಐ, ಜೈಲಿನ ವೈದ್ಯ ಸೇರಿ ಮೂವರು ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 2ನೇ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರ ಟಿ.ನಾಸೀರ್ಗೆ ಸಹಕಾರ ನೀಡಿದ ಸಿಎಆರ್, ಎಎಸ್ಐ, ಜೈಲಿನ ವೈದ್ಯ ಸೇರಿ ಮೂವರು ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 2ನೇ ಆರೋಪಪಟ್ಟಿ ಸಲ್ಲಿಸಿದ್ದಾರೆ.ಜೈಲಿನ ಮನೋವೈದ್ಯ ನಾಗರಾಜ್, ಸಿಎಆರ್, ಎಎಸ್ಐನ ಚಾನ್ ಪಾಷಾ ಮತ್ತು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ತಾಯಿ ಅನಿಸಾ ಫಾತೀಮಾ ವಿರುದ್ಧ ಸ್ಫೋಟಕ ವಸ್ತುಗಳ ತಡೆ ಕಾಯ್ದೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆಯಡಿ ಆರೋಪಪಟ್ಟಿಯನ್ನು ಗುರುವಾರ ಸಲ್ಲಿಸಲಾಗಿದೆ.
2023ರ ಅಕ್ಟೋಬರ್ನಲ್ಲಿ ಸಿಸಿಬಿಯ ಅಂದಿನ ಮುಖ್ಯಸ್ಥ ಡಾ.ಶರಣಪ್ಪ ನೇತೃತ್ವದ ತಂಡ 7 ಮಂದಿ ಉಗ್ರರನ್ನು ಬಂಧಿಸಿತ್ತು. ಈ ವೇಳೆ ಒಬ್ಬ ಉಗ್ರನ ಮನೆಯಲ್ಲಿ ನಾಲ್ಕೈದು ಜೀವಂತ ಗ್ರೇನೇಡ್, ಶಸ್ತ್ರಾಸ್ತ್ರಗಳು, ವಾಕಿ ಟಾಕಿಗಳು, ಡಿಜಿಟಲ್ ಸಾಧನಗಳು, ಮದ್ದುಗುಂಡುಗಳು ಸೇರಿ ಇತರೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಈ ವೇಳೆ ಪ್ರಕರಣದ ಮಾಸ್ಟರ್ಮೈಂಡ್ ಜುನೈದ್ ಅಹ್ಮದ್ ದುಬೈನಲ್ಲಿ ತರೆಮರೆಸಿಕೊಂಡಿದ್ದ. ಈ ಸಂಬಂಧ ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. ನಂತರ ಪರಾರಿಯಾಗಿದ್ದ ಜುನೈದ್ ಸೇರಿ 9 ಆರೋಪಿಗಳ ವಿರುದ್ಧ ಈ ಹಿಂದೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಟಿ.ನಾಸೀರ್ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವ ದಾರಿಯಲ್ಲಿ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಬಂಧಿತರು ಸಂಚು ರೂಪಿಸಿದ್ದರು.ನಾಸೀರ್ ಎಸ್ಕೇಪ್ ಮಾಡಲು ಪ್ಲಾನ್:ಟಿ.ನಾಸೀರ್ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವ ದಾರಿಯಲ್ಲಿ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಬಂಧಿತರು ಸಂಚು ರೂಪಿಸಿದ್ದರು. ಬಂಧಿತ ಆರೋಪಿಗಳ ಪೈಕಿ ಅನೀಸ್ ಫಾತೀಮಾ, ನಾಸೀರ್ ತಪ್ಪಿಸಿಕೊಳ್ಳಲು ಸಂಚು ರೂಪಿಸುವುದರ ಜತೆಗೆ, ಆರ್ಥಿಕ ಸಹಾಯ ಮಾಡುತ್ತಿದ್ದಳು. ಅಲ್ಲದೆ, ತನ್ನ ಪುತ್ರ ಜುನೈದ್ ಅಹ್ಮದ್ ಸೂಚನೆ ಮೇರೆಗೆ ಹ್ಯಾಂಡ್ ಗ್ರೇನೇಡ್ಗಳು, ವಾಕಿ ಟಾಕಿಗಳನ್ನು ಇತರೆ ಶಂಕಿತರಿಗೆ ಪೂರೈಕೆ ಮಾಡಲು ಸೂಚಿಸಿದ್ದರು. ಅಲ್ಲದೆ, ಜೈಲಿನಲ್ಲಿ ಶಂಕಿತರು ಪರಸ್ಪರ ಮಾತನಾಡಲು ಮೊಬೈಲ್ಗೆ ಪೂರೈಕೆ ಮಾಡಿದ್ದಳು. ಪುತ್ರ ಜುನೈದ್ ಅಹ್ಮದ್ ದುಬೈಗೆ ಪರಾರಿಯಾಗಲು ನೆರವು ನೀಡಿದ್ದಳು. ಅಲ್ಲದೆ, ರವಾಂಡಾ ದೇಶದಿಂದ ಬಂಧಿಸಿ ಕರೆತಂದ ಸಲ್ಮಾನ್ ಖಾನ್ಗೆ ಆಶ್ರಯ ನೀಡಿದಲ್ಲದೆ, ಆತ ವಿದೇಶಕ್ಕೆ ಪರಾರಿಯಾಗಲು ಅಗತ್ಯ ದಾಖಲೆಗಳ ವ್ಯವಸ್ಥೆ ಮಾಡಿದ್ದರು.
ಚಾನ್ ಪಾಷಾ ಸಿಎಆರ್ನ ಎಎಸ್ಐ ಆಗಿದ್ದ. ಆತನಿಗೆ ಜೈಲಿನ ಕೈದಿಗಳನ್ನು ಕೋರ್ಟ್ಗೆ ಕರೆದೊಯ್ಯುವ ಬೆಂಗಾವಲು ವಾಹನದ ಮೇಲುಸ್ತುವಾರಿ ನೀಡಲಾಗಿತ್ತು. ಟಿ.ನಾಸೀರ್ಗೆ ಬೆಂಗಾವಲು ಮಾಹಿತಿಯನ್ನು ಸಲ್ಮಾನ್ ಖಾನ್ಗೆ ನೀಡಿದ್ದ. ಅಲ್ಲದೆ, ಆತನಿಂದ ಹಣ ಪಡೆದುಕೊಂಡಿದ್ದ. ಮತ್ತೊಬ್ಬ ಆರೋಪಿ ಜೈಲಿನ ಮನೋವೈದ್ಯ ನಾಗರಾಜ್, ಜೈಲಿಗೆ ಅಕ್ರಮವಾಗಿ ಮೊಬೈಲ್ಗಳನ್ನು ಕಳ್ಳಸಾಗಣೆ ಮಾಡಿ ಟಿ.ನಾಸೀರ್ ಸೇರಿ ಇತರೆ ಕೈದಿಗಳಿಗೆ ಮಾರಾಟ ಮಾಡುತ್ತಿದ್ದ. ನಾಸೀರ್ಗೆ ನಾಲ್ಕೈದು ಮೊಬೈಲ್ಗಳನ್ನು ಮಾರಾಟ ಮಾಡಿದ್ದು, ಆತನಿಂದ ಲಕ್ಷಾಂತರ ರು. ಪಡೆದುಕೊಂಡಿದ್ದಾನೆ. ನಾಸೀರ್ ಉಗ್ರ ಎಂದು ಗೊತ್ತಿದ್ದರೂ ಭಯೋತ್ಪಾದನಾ ಸಂಚು ರೂಪಿಸಲು ಸಹಕಾರ ನೀಡಿದ್ದಾನೆ ಎಂದು ಎನ್ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.