ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಿದ ಪ್ರಕರಣದ ಸಂಬಂಧ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ತಲೆದಂಡವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಿದ ಪ್ರಕರಣದ ಸಂಬಂಧ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ತಲೆದಂಡವಾಗಿದೆ.

ಬಾಗಲೂರು, ಕೊತ್ತನೂರು ಮತ್ತು ಅವಲಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿ ಸೋಮವಾರ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಆವಲಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ, ಕೊತ್ತನೂರು ಠಾಣೆ ಇನ್‌ಸ್ಪೆಕ್ಟರ್ ಚೇತನ್ ಕುಮಾರ್ ಹಾಗೂ ಬಾಗಲೂರು ಠಾಣೆಯ ಇನ್‌ಸ್ಪೆಕ್ಟರ್ ಶಬರೀಶ್ ಅವರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿದ್ದಾರೆ.

ಪ್ರಭಾರಿ ಅಧಿಕಾರಿಗಳ ನೇಮಕ:

ಅಮಾನತ್ತಿನಿಂದ ತೆರವಾದ ಠಾಣೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿಶೇಷ ಕರ್ತವ್ಯದ ಮೇರೆಗೆ ಪ್ರಭಾರಿಯಾಗಿ ಈಶಾನ್ಯ ವಿಭಾಗದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಆರ್.ವೆಂಕಟೇಶ್ ಅವರನ್ನು ಬಾಗಲೂರು ಠಾಣೆಗೆ, ಕೆ.ಆರ್‌.ಪುರ ಠಾಣೆ ಇನ್‌ಸ್ಪೆಕ್ಟರ್‌ ಬಿ.ರಾಮಮೂರ್ತಿ ಅವರನ್ನು ಆವಲಹಳ್ಳಿ ಠಾಣೆಗೆ ಹಾಗೂ ಸಂಪಿಗಹಳ್ಳಿ ಠಾಣೆಯಿಂದ ಇನ್‌ಸ್ಪೆಕ್ಟರ್‌ ಎಂ.ಚಂದ್ರಶೇಖರ್‌ನ್ನು ಕೊತ್ತನೂರು ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ನಗರ ವಿಶೇಷ ಶಾಖೆಯಿಂದ ಪಿಐ ಡಿ.ಸಿ.ಮಂಜು ಎಂಬುವರನ್ನು ಕಮರ್ಷಿಯಲ್ ಸ್ಟ್ರೀಟ್ ಮತ್ತು ಶಿವಾಜಿನಗರ ಠಾಣೆಗೆ ವರ್ಗಾವಣೆಗೊಳಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸರು ಡಿ.27 ರಂದು ಬೆಂಗಳೂರಿನ ಮೂರು ಕಡೆಗಳಲ್ಲಿ ಅಕ್ರಮವಾಗಿ ಮಾದಕ ವಸ್ತು ತಯಾರಿಸುತ್ತಿದ್ದ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ ಸುಮಾರು 55.88 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಕರ್ತವ್ಯಲೋಪ ಆರೋಪದಡಿ ಇದೀಗ ಮೂವರು ಇನ್‌ಸ್ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.