ಗುರುಕುಲ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಸಾಂಸ್ಕೃತಿಕ ಆಚರಣೆ ಡಿ.೩೧ ಮತ್ತು ಜ.೧ ರಂದು ಗುರುಕುಲ ಆವರಣದಲ್ಲಿ ಜರುಗಲಿದೆ.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಬಾಹುಬಲಿ ವಿದ್ಯಾಪೀಠಾಂತರ್ಗತ ಶ್ರೀಜಿನಸೇನಾಚಾರ್ಯ ವಿದ್ಯಾಮಂಡಳ ತೇರದಾಳ ಇವರು ನಡೆಸುವ ಗುರುಕುಲ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಸಾಂಸ್ಕೃತಿಕ ಆಚರಣೆ ಡಿ.೩೧ ಮತ್ತು ಜ.೧ ರಂದು ಗುರುಕುಲ ಆವರಣದಲ್ಲಿ ಜರುಗಲಿದೆ.ಗುರುವಾರ ಸಂಜೆ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಬಿ.ಆಲಗೂರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎರಡು ದಿನಗಳ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ, ಡಿ.೩೧ರಂದು ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸುವರು. ಜೆ.ವ್ಹಿ.ಮಂಡಳ ತೇರದಾಳ ಅಧ್ಯಕ್ಷ ಟಿ.ಸಿ.ಪಡಸಲಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಹುಬಲಿ ವಿದ್ಯಾಪೀಠದ ಕಾರ್ಯದರ್ಶಿ ಡಿ.ಸಿ.ಪಾಟೀಲ ಮತ್ತು ಕೋಶಾಧ್ಯಕ್ಷ ಬಾಬಾಸಾಹೇಬ ಪಾಟೀಲ ಆಗಮಿಸಲಿದ್ದಾರೆ. ಶ್ರೀಜಿನಸೇನಾಚಾರ್ಯ ವಿದ್ಯಾಮಂಡಳದ ಆಡಳಿತ ಮಂಡಳಿ ಸರ್ವಸದಸ್ಯರು ಅತಿಥಿಗಳಾಗಿರುತ್ತಾರೆ. ಎಸ್.ಎಂ.ಪ್ರೌಢಶಾಲೆ, ಎಸ್.ಜೆ.ವಿದ್ಯಾಲಯ, ಪಿ.ಎಸ್.ಗುಂಡೇವಾಡೆ ಕಿರಿಯ ಪ್ರಾಥಮಿಕ ಶಾಲೆ ಮತ್ತು ಜೆ.ವ್ಹಿ.ಎಂ ಪಾಲಿಟೆಕ್ನಿಕ್ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು, ಎಲ್ಲಾ ಸಿಬ್ಬಂದಿ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ.
ಜ.೧ರಂದು ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಲಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸುವರು. ಶ್ರೀಜಿನಸೇನಾಚಾರ್ಯ ವಿದ್ಯಾಮಂಡಳದ ಆಡಳಿತ ಮಂಡಳಿ ಸರ್ವ ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ ೬ ಗಂಟೆಗೆ ಜರುಗುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಜೆ.ವ್ಹಿ ಮಂಡಳ ಸ್ವ.ಪ.ಪೂ.ಮಹಾವಿದ್ಯಾಲಯ, ಎಸ್.ಜೆ.ಹೆಣ್ಣುಮಕ್ಕಳ ಪ್ರೌಢಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದು, ಅಂಗಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆಂದು ಡಾ.ಜೆ.ಬಿ.ಆಲಗೂರ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಎಲ್.ಎಂ. ಬಿರಾದಾರ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಡಾ.ಶರಣು ನುಚ್ಚಿ ಉಪಸ್ಥಿತರಿದ್ದರು.