ಹುಬ್ಬಳ್ಳಿ:
ಶ್ರೀಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭಾರತೀಯ ಪ್ರಾಚ್ಯವಸ್ತು ಮತ್ತು ಪುರತತ್ವ ಇಲಾಖೆಯಿಂದ ನಿರಪೇಕ್ಷಣಾ ಪ್ರಮಾಣ ಪತ್ರ (ಎನ್ಒಸಿ) ದೊರೆತಿದೆ. ಈಗಾಗಲೇ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ದೇವಸ್ಥಾನದ ಸುತ್ತಲಿರುವ 33 ಮನೆ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.ಬುಧವಾರ ಉಣಕಲ್ಲಿನಲ್ಲಿರುವ ಶ್ರೀಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪುರಾತತ್ವ ಇಲಾಖೆಯು ಈ ದೇವಸ್ಥಾನವನ್ನು ಸ್ಮಾರಕವೆಂದು ಗುರುತಿಸಿದೆ. ಆ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲೂ ಯಾವುದೇ ಮನೆ ಇರಬಾರದು ಎಂದು ಪುರಾತತ್ವ ಇಲಾಖೆ ನಿಯಮಾವಳಿಗಳು ಸೂಚಿಸುತ್ತವೆ. ದೇವಸ್ಥಾನವು 1,271 ಚ.ಮೀ. ವಿಸ್ತೀರ್ಣ ಹೊಂದಿದ್ದು 3,901 ಚ.ಮೀ. ಪ್ರದೇಶವನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತಲಿರುವ 33 ಮನೆ ತೆರವಿಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಈ ಮನೆಗಳ ಮಾಲೀಕರಿಗೆ ಪರಿಹಾರ ಧನ ಒದಗಿಸಲಾಗುವುದು. ಭೂ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಈಗಾಗಲೇ ₹ 9 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹು-ಧಾ ಮಹಾನಗರ ಪಾಲಿಕೆಯ ಹಂತದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.ಬಳಿಕ ಜಿಲ್ಲಾಧಿಕಾರಿ ಉಣಕಲ್ಲ ಕೆರೆ, ತೋಳನಕೆರೆ, ಜಯದೇವ ಆಸ್ಪತ್ರೆ ಹಾಗೂ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸಹಾಯಕ ಆಯುಕ್ತ ವಿಜಯಕುಮಾರ, ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.