ಸಾರಾಂಶ
ಹಂಪಿ ಸ್ಮಾರಕಗಳು ಜಗದ್ವಿಖ್ಯಾತವಾಗಿವೆ. ಈ ಸ್ಮಾರಕಗಳಿಗೆ 35 ಅಂಧ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಕೂಡ ಪಡೆದುಕೊಂಡು ಖುಷಿಪಟ್ಟರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿ ಸ್ಮಾರಕಗಳು ಜಗದ್ವಿಖ್ಯಾತವಾಗಿವೆ. ಈ ಸ್ಮಾರಕಗಳಿಗೆ 35 ಅಂಧ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಕೂಡ ಪಡೆದುಕೊಂಡು ಖುಷಿಪಟ್ಟರು.ಹಂಪಿ ಸ್ಮಾರಕಗಳನ್ನು ನೋಡಲು ಕಣ್ಣು ಇಲ್ಲದಿದ್ದರೂ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಈ ಸ್ಮಾರಕಗಳ ಬಗ್ಗೆ ಅರಿತುಕೊಳ್ಳಲು ಖುದ್ದು ಭೇಟಿ ನೀಡಿದರು. ಕೆಲ ಕಡೆ ಸ್ಮಾರಕಗಳನ್ನು ಮುಟ್ಟಿ ಖುಷಿಗೊಂಡರು. ಹಂಪಿ ಸ್ಮಾರಕಗಳನ್ನು ಮುಟ್ಟಲು ನಿರ್ಬಂಧ ಇರುವ ಹಿನ್ನೆಲೆ ಬಹುತೇಕ ಕಡೆ ಪ್ರವಾಸಿ ಮಾರ್ಗದರ್ಶಿಗಳಿಂದ ಈ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸ್ನೇಹ ದೀಪಾ ಸಂಸ್ಥೆ ಹಾಗೂ ಜ್ಞಾನ ಲಹರಿ ಸಂಸ್ಥೆಯ ಈ ವಿದ್ಯಾರ್ಥಿಗಳು ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ರಥ ಬೀದಿ ಸಾಲು ಮಂಟಪಗಳು, ಸಾಸಿವೆ ಕಾಳು, ಕಡಲೆ ಕಾಳು ಗಣಪತಿ ಮಂಟಪ, ಹಜಾರ ರಾಮ ದೇವಾಲಯ, ರಾಜ ಸಭಾಂಗಣ ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಖುಷಿಯಾದರು. ಈ ತಂಡದ ಜೊತೆಗೆ ತರಬೇತುದಾರ ಶಿಕ್ಷಕರಾದ ದೀಕ್ಷಾ, ಅಚ್ಯುತ್ ನಾಯ್ಕ ಕೂಡ ಇದ್ದರು. ಇನ್ನೂ ಮಾಜಿ ತರಬೇತುದಾರ ಮಾರುತಿ ಸೇರಿದಂತೆ ಐದಾರು ಸ್ವಯಂ ಸೇವಕರು ಈ ಅಂಧ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.