ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಬೆಟ್ಟದಹೊಸೂರು ಗ್ರಾಮದಲ್ಲಿ ನಿರ್ಮಿಸಿರುವ 38 ಅಡಿ ಎತ್ತರದ ಪಂಚಮುಖಿ ಆಂಜನೇಯಮೂರ್ತಿ ಲೋಕಾರ್ಪಣೆ ಮತ್ತು ಬೆಟ್ಟದ ಕೆಳಗೆ 15 ಅಡಿ ಎತ್ತರದ ಗಣಪತಿ ವಿಗ್ರಹದ ಪ್ರತಿಷ್ಠಾಪನಾ ಸಮಾರಂಭ ಅರ್ಚಕರಾದ ಎಚ್.ಪಿ ಸುಂದರ್ ಮತ್ತು ಬಿ.ಆರ್.ಮನೋಹರ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.

ಗ್ರಾಮದ ಕರಿಬೆಟ್ಟೇಗೌಡರ ಕುಟುಂಬದ ಕುಮಾರ್ ತಮ್ಮ ಮಗಳ ಸ್ಮರಣಾರ್ಥ ಲೋಕ ಕಲ್ಯಾಣಾರ್ಥ ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀಕ್ಷೇತ್ರದಲ್ಲಿ ಗವಿರಂಗಾಥಸ್ವಾಮಿ ದೇಗುಲ, ಬನ್ನಿ ಮಂಟಪ, ನವಗ್ರಹ ಮಂಟಪ ನಿರ್ಮಿಸಿಕೊಟ್ಟಿದ್ದು, ಈಗ ಬೆಟ್ಟದ ಮೇಲೆ 35 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ನಿರ್ಮಿಸಿಕೊಟ್ಟು ಪ್ರಾಚೀನ ಇತಿಹಾಸದ ಬೋಳಾರೆ ರಂಗನಾಥಸ್ವಾಮಿ ಕ್ಷೇತ್ರವನ್ನು ಭಕ್ತರ ತಪೋಭೂಮಿಯನ್ನಾಗಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಲ್ಯಾಣಿ ಜೀರ್ಣದ್ದಾರಕ್ಕೂ ಮುಂದಾಗಿದ್ದಾರೆ ಎಂದು ದೇಗುಲ ಟ್ರಸ್ಟ್ ಅಧ್ಯಕ್ಷ ಬಿ.ಟಿ.ವೆಂಕಟೇಶ್ ತಿಳಿಸಿದರು.

ಸೇವಾರ್ಥದಾರ ಕರಿಬೆಟ್ಟೇಗೌಡ ಮಾತನಾಡಿ, ಕ್ಷೇತ್ರದಲ್ಲಿ ದೇವಸ್ಥಾನ ನಿರ್ಮಿಸಬೇಕು ಮತ್ತು ಬೆಟ್ಟದಮೇಲೆ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂಬ ದೈವ ಪ್ರೇರಣೆಯಾಯಿತು. ಮೃತಪಟ್ಟಿರುವ ಮಗಳ ನೆನಪಿಗಾಗಿ ಈ ಧಾರ್ಮಿಕ ಕಾರ್ಯಗಳನ್ನು ಗ್ರಾಮಸ್ಥರು ಮತ್ತು ಭಕ್ತರ ನೆರವಿನಿಂದ ಮಾಡಿದ್ದೇನೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯೆ ಸರ್ವಮಂಗಳ ವೆಂಕಟೇಶ್, ಕರಿಬೆಟ್ಟೇಗೌಡರ ಕುಟುಂಬದ ಸದಸ್ಯರಾದ ಡಾ.ರಂಗಸ್ವಾಮಿ, ಪಾಪಣ್ಣ ಕುಟುಂಬದವರು, ಗ್ರಾಮದ ಮುಖಂಡರಾದ ಪಟೇಲ್ ಸ್ವಾಮಣ್ಣ, ಕುಮಾರ್, ನಾಗೇಂದ್ರ, ಚಲುವರಾಜು, ಸೋಮೇಗೌಡ, ಸಂತೋಷ, ಮಹೇಶ್, ದಿನೇಶ್, ಪಟೇಲ್ ಕುಮಾರ್, ರಾಜಣ್ಣ ಸೇರಿದಂತೆ ಬೆಟ್ಟದ ಹೊಸೂರಿನ ಗ್ರಾಮಸ್ಥರು ಭಾಗವಹಿಸಿದ್ದರು.