ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಿಂದ 65 ಮಂದಿ ಯುವಕರು ಸುಮಾರು 380 ಕಿ. ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಭಕ್ತಿ, ಆರೋಗ್ಯ ಹಾಗೂ ಶಿಸ್ತಿನ ಅಪೂರ್ವ ಸಂದೇಶ ಸಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಿಂದ 65 ಮಂದಿ ಯುವಕರು ಸುಮಾರು 380 ಕಿ. ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಭಕ್ತಿ, ಆರೋಗ್ಯ ಹಾಗೂ ಶಿಸ್ತಿನ ಅಪೂರ್ವ ಸಂದೇಶ ಸಾರಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತ ಯುವಕರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕಾರ್ಯದರ್ಶಿ ಎ. ವಿ. ಶೆಟ್ಟಿ ಸ್ವಾಗತಿಸಿ ಶುಭ ಹಾರೈಸಿದರು.

36 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸೈಕಲ್ ಭಕ್ತಿ ಜಾಥಾವನ್ನು ಇವರ ಹಿರಿಯರು ಆರಂಭಿಸಿದ್ದು, ಆ ಪರಂಪರೆಯನ್ನು ಇಂದಿನ ಯುವಕರು ಅದೇ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ನೂರಾರು ಗ್ರಾಮಗಳ ಮೂಲಕ ಸಾಗುವ ಈ ಜಾಥಾ ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಸದಾಚಾರದ ಕುರಿತು ಜಾಗೃತಿ ಮೂಡಿಸುತ್ತಿದೆ.

‘ಯುವಕರು ಆರೋಗ್ಯವಂತರಾಗಿರಬೇಕು, ದುಶ್ಚಟಗಳಿಂದ ದೂರವಿರಬೇಕು ಹಾಗೂ ಶಿಸ್ತು-ಭಕ್ತಿಯ ಜೀವನ ನಡೆಸಬೇಕು’ ಎಂಬ ಉದಾತ್ತ ಸಂದೇಶವನ್ನು ಜನರಿಗೆ ತಲುಪಿಸುವುದೇ ಈ ಜಾಥಾದ ಪ್ರಮುಖ ಉದ್ದೇಶವಾಗಿದೆ.

ಧರ್ಮಸ್ಥಳಕ್ಕೆ ಆಗಮಿಸಿದ ಯುವಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಭಕ್ತಿಯ ಅನುಭವವನ್ನು ಮನದಲ್ಲಿ ತುಂಬಿಕೊಂಡು ತಮ್ಮ ಊರಿನತ್ತ ಮರಳಲಿದ್ದಾರೆ.