ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ಜೂನ್ 6ರಂದು ಬೆಳಗ್ಗೆ 11ಕ್ಕೆ ನಗರದ ಕೆಕೆಎಂಪಿ ಸಮುದಾಯ ಭವನದಲ್ಲಿ ರಾಜ್ಯಮಟ್ಟದ ಸಭೆ ಮತ್ತು ಜಿಲ್ಲಾ ಸಮಾವೇಶ ಹಾಗೂ ಜೂ.7ರಂದು ಛತ್ರಪತಿ ಶೀವಾಜಿ ಮಹಾರಾಜರ 399ನೇ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಕೆಕೆಎಂಪಿ ಜಿಲ್ಲಾಧ್ಯಕ್ಷ ಭೀಮಾಶಂಕರ ಶಿವಾಳಕರ ಹೇಳಿದರು.

ನಗರದ ಕೆಕೆಎಂಪಿ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೆಂಗಳೂರು ವಿರಂಪುರದಲ್ಲಿರುವ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಅವರು ವಹಿಸಲಿದ್ದು, ಸಂಘದ ರಾಜ್ಯಾಧ್ಯಕ್ಷ ಎಸ್.ಸುರೇಶರಾವ ಸಾಠೆರವರು ಅಧ್ಯಕ್ಷತೆ ವಹಿಸಲಿದ್ದಾರೆ. ನಾಯಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ಎಲ್ಲಾ ಜಿಲ್ಲಾಧ್ಯಕ್ಷರು ಭಾಗವಹಿಸಲಿದ್ದಾರೆ.

ಸಮಾಜದ ಯುವಪೀಳಿಗೆಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಬಿಂಬಿಸುವ ವಿಶೇಷ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ಸಮಾಜವನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪರಿಷತ್ತಿನ ತಾಲೂಕಾ ಸಮಿತಿ ಶಾಖೆಗಳನ್ನು ಸಕ್ರಿಯಗೊಳಿಸಲಾಗಿದೆ.

ಈ ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ವಿತರಿಸಲಾಗುವುದು. ಜಿಲ್ಲೆಯ ಎಲ್ಲ ಮರಾಠಾ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಮಾಹಿತಿಗಾಗಿ ಜಿಲ್ಲಾಧ್ಯಕ್ಷ ಬಿ.ಬಿ.ಶಿವಾಳಕರ (7676573249), ಕಾರ್ಯದರ್ಶಿ ರಾಮು ಜಾಧವ (9980330563) ಅಥವಾ ಖಜಾಂಜಿ ಸುಭಾಷ ಚವಾಣ (9448783886) ಅವರನ್ನು ಸಂಪರ್ಕಿಸಬೇಕೆಂದು ಅವರು ಕೋರಿದರು.


ಜತೆಗೆ ಜೂನ್ 6ರಂದು ರಾಜ್ಯಮಟ್ಟದ ಸಭೆ ಕರೆಯಲಾಗಿದೆ. ರಾಜ್ಯಾಧ್ಯಕ್ಷ ಎಸ್.ಸುರೇಶರಾವ ಸಾಠೆ ಹಾಗೂ ಎಲ್ಲ ಜಿಲ್ಲೆಗಳಿಂದ 70ಕ್ಕೂ ಅಧಿಕ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ 13 ತಾಲೂಕುಗಳಲ್ಲಿರುವ ತಾಲೂಕು ಸಮಿತಿಗಳು ಭಾಗವಹಿಸಲಿವೆ. ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಮೂಲೆ‌ ಮೂಲೆಯಿಂದ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಶಿವಾಜಿ‌ ಮಹಾರಾಜರ ಚಿಂತನೆ, ತತ್ವ, ಸಿದ್ದಾಂತಗಳ ಕುರಿತು ಅರಿವು ಮೂಡಿಸಲಾಗುವುದು ಎಂದರು. ಮೀಸಲಾತಿ ವಿಚಾರವಾಗಿ ಹಕ್ಕೊತ್ತಾಯ ಮಂಡಿಸಲಾಗುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ, ನೌಕರಿ ಸೇರಿದಂತೆ ಉನ್ನತ ಶಿಕ್ಷಣಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ರಾಮು ಜಾಧವ ಮಾತನಾಡಿ, ಜೂನ್ 6ರಂದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವಾಗಿರುವುದರಿಂದ ಮರಾಠ ಸಮಾಜದ ಹಿರಿಯರು ಕ್ಷತ್ರಿಯ ಮರಾಠ ಪರಿಷತ್ತಿನ ಸಹಯೋಗದಲ್ಲಿ ರಾಜ್ಯಮಟ್ಟದ ಸಭೆ ನಡೆಯಲಿದೆ. ಜೂನ್ 7ರಂದು ಜಯಂತ್ಯುತ್ಸವ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಸಮಾಜದ ಬಂಧುಗಳು ಹಾಗೂ ಹಿಂದೂ ಸಮುದಾಯದ ಎಲ್ಲರು ಭಾಗವಹಿಸಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಶ ಜಾಧವ, ರಾಮು ಜಗತಾಪ, ಸಂಜಯ ಜಾಧವ, ರಮೇಶ ಗಾಯಕವಾಡ, ರಮೇಶ ಬೀಳಗಿ, ಮಹಾದೇವ ಪವಾರ, ಸಾಗರ ಘೋರ್ಪಡೆ, ತುಕಾರಾಮ ಘೋರ್ಪಡೆ, ಸಂತೋಷ ಪವಾರ, ಸುಧೀರ ಪವಾರ‌ ಇದ್ದರು.