- ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ಹೆಮ್ಮೆಯ ಗರಿ

- ಜಪಾನ್‌ನ ಜೆಂಕೆನ್ ಕಾರ್ಪೋರೇಷನ್ ಸಹಯೋಗದೊಂದಿಗೆ ಪ್ಲೇಸ್ಮೆಂಟ್

ಕನ್ನಡಪ್ರಭ ವಾರ್ತೆ ಮಂಡ್ಯ

೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ನಗರದ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆದಿದ್ದಾರೆ. ಇದರೊಂದಿಗೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ವಿಶೇಷ ಗರಿ ಮೂಡಿದಂತಾಗಿದೆ.

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಎಲ್.ಹಿತಶ್ರೀ (ಸಿಎಸ್‌ಇ) ಸ್ಪೈಕ್ ಸ್ಟುಡಿಯೋ, ಜಪಾನ್, ಸಂದೀಪ್‌ಕುಮಾರ್ (ಎಂ.ಇ.) ಸ್ಟಾರ್ ಸೈಕಿ ಕೋ.ಲಿ., ಜಪಾನ್, ಜಿ.ತ್ರಿಪ್ತಿ (ಸಿವಿಲ್) ತಗುಚಿ ಪ್ಯಾಟರ್ನ್ ವರ್ಕ್ಸ್ ಕೋ.ಲಿ., ಜಪಾನ್, ಎಂ.ವಿ. ಸೋಹನಾ (ಇಸಿಇ) ಡೈಡೋ ಸ್ಟೀಲ್ ಕೋ.ಲಿ., ಜಪಾನ್‌ನಲ್ಲಿ ಉದ್ಯೋಗ ಗಳಿಸುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ಪ್ರಾಂಶುಪಾಲ ಡಾ.ಎನ್.ಎಲ್.ಮುರಳಿ ಕೃಷ್ಣ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ತರಬೇತಿ ಮತ್ತು ನೇಮಕಾತಿ ಅಧಿಕಾರಿ ಕೆ.ಪಿ.ದೀಪ್ತಿ ಅವರ ಸಹಕಾರದಲ್ಲಿ ತರಬೇತಿ ಮತ್ತು ನೇಮಕಾತಿ ವಿಭಾಗವು ಜಾಗತಿಕ ಸಂಸ್ಥೆಗಳ ಸಹಕಾರದಿಂದ ಈ ಅಂತಾರಾಷ್ಟ್ರೀಯ ನೇಮಕಾತಿಯನ್ನು ಯಶಸ್ವಿಯಾಗಿ ಸಾಧಿಸಿದೆ.ಈ ಯಶಸ್ಸಿನ ಪ್ರಮುಖ ಪಾಲುದಾರ ಸಂಸ್ಥೆಯಾಗಿ ಜಪಾನ್‌ನ ಜೆಂಕೆನ್ ಕಾರ್ಪೋರೇಷನ್ ಗುರುತಿಸಿಕೊಂಡಿದೆ. ಇದೊಂದು ಅಂತಾರಾಷ್ಟ್ರೀಯ ನೇಮಕಾತಿ ಸಂಸ್ಥೆಯಾಗಿದ್ದು, ಇಂಜಿನಿಯರಿಂಗ್ ಪದವೀಧರರನ್ನು ಜಪಾನ್‌ನ ಕೈಗಾರಿಕೆಗಳೊಂದಿಗೆ ಸಂಪರ್ಕಿಸುವಂತೆ ಮಾಡುತ್ತಿದೆ. ಜಪಾನೀಸ್ ಭಾಷಾ ತರಬೇತಿ, ಸಾಂಸ್ಕೃತಿಕ ಪರಿಚಯ, ವೃತ್ತಿ ಮಾರ್ಗದರ್ಶನ ಹಾಗೂ ವೀಸಾ ಸಹಾಯವನ್ನು ಒದಗಿಸುತ್ತದೆ.ಪಿಇಎಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಗಣನೀಯ ಜಾಗತಿಕ ಪ್ಲೇಸ್ಮೆಂಟ್‌ಗಳನ್ನು ಸಾಧಿಸುವ ಮೂಲಕ ಮತ್ತೊಮ್ಮೆ ತನ್ನ ಶೈಕ್ಷಣಿಕ ಮೇಲುಗೈ ಮತ್ತು ಜಾಗತಿಕ ವ್ಯಾಪ್ತಿಯನ್ನು ಸಾಬೀತುಪಡಿಸಿದೆ. ಈ ಸಾಧನೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳೆಸುವುದಲ್ಲದೆ, ಅವರಿಗೆ ಜಾಗತಿಕ ಮಟ್ಟದಲ್ಲಿ ವೃತ್ತಿ ಅವಕಾಶಗಳನ್ನು ಒದಗಿಸುವ ಬದ್ಧತೆಯನ್ನು ಪ್ರತಿಬಿಂಬಿಸಲಿದೆ.ಕಳೆದ ಮೂರು ವರ್ಷಗಳಿಂದ ಜಾಗತಿಕ ಪ್ಲೇಸ್ಮೆಂಟ್‌ಗೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದು, ಒಬ್ಬರು, ಇಬ್ಬರು ಉದ್ಯೋಗ ಪಡೆಯುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ನಾಲ್ವರು ವಿದ್ಯಾರ್ಥಿಗಳು ಜಪಾನ್‌ನಲ್ಲಿ ಉದ್ಯೋಗ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ನಿತ್ಯ ಸಚಿವ ಕೆ.ವಿ. ಶಂಕರಗೌಡ ಅವರ ದೂರದೃಷ್ಟಿಯಿಂದ ಸ್ಥಾಪಿತವಾದ ಈ ಸಂಸ್ಥೆ, ಗುಣಮಟ್ಟದ ಶಿಕ್ಷಣ, ನವೀನತೆ ಮತ್ತು ಜಾಗತಿಕ ಅನಾವರಣದ ಮೂಲಕ ವಿದ್ಯಾರ್ಥಿಗಳನ್ನು ಸಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಅವರ ದೃಷ್ಟಿಕೋನವು ಸಂಸ್ಥೆಯನ್ನು ಹೊಸ ಸಾಧನೆಗಳತ್ತ ಮುನ್ನಡೆಸುತ್ತಲೇ ಇದೆ.

ಪ್ರಸ್ತುತ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿರುವ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್. ವಿಜಯ್‌ಆನಂದ್ ಅವರ ನೇತೃತ್ವ ಮತ್ತು ನಿರಂತರ ಬೆಂಬಲದೊಂದಿಗೆ ಕಾಲೇಜು ತನ್ನ ಜಾಗತಿಕ ಸಂಪರ್ಕ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿದೆ.

ವಿದೇಶದಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಗಳನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್ ಅವರು ಅಭಿನಂದಿಸಿ, ಅವರ ಪರಿಶ್ರಮ ಮತ್ತು ಪ್ರತಿಭೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಪ್ರಶಂಸಿಸಿದ್ದಾರೆ.

---------------------------------------

ಎರಡು-ಮೂರು ವರ್ಷದಿಂದ ಒಬ್ಬರು, ಇಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಗಳಿಸುತ್ತಿದ್ದರು. ಮೊದಲ ಬಾರಿಗೆ ನಾಲ್ವರು ಇಂಜಿನಿಯರ್ ವಿದ್ಯಾರ್ಥಿಗಳು ಜಪಾನ್‌ನಲ್ಲಿ ಉದ್ಯೋಗ ಗಳಿಸಿದ್ದಾರೆ. ಇದೊಂದು ಅವಿಸ್ಮರಣೀಯ ಸಾಧನೆ. ಕಾಲೇಜಿನ ಉಪನ್ಯಾಸಕರ ಗುಣಮಟ್ಟದ ಶಿಕ್ಷಣ, ತರಬೇತಿ, ಸಹಕಾರವೇ ಈ ಸಾಧನೆಗೆ ಕಾರಣವಾಗಿದೆ. ಹೆಚ್ಚು ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡುವುದಕ್ಕೆ ಕಾಲೇಜು ಸದಾ ಪ್ರೇರಣದಾಯಕವಾಗಿರುತ್ತದೆ.

- ಕೆ.ಎಸ್.ವಿಜಯ್ ಆನಂದ್, ಅಧ್ಯಕ್ಷರು, ಪಿಇಟಿ ಟ್ರಸ್ಟ್--------------------

(ಎಲ್. ಹಿತಶ್ರೀ, ಸಂದೀಪ್ ಕುಮಾರ್, ಜಿ. ತ್ರಿಪ್ತಿ, ಎಂ.ವಿ. ಸೋಹನಾ) ಅವರ ಹೆಸರಿನಲ್ಲೇ ಫೋಟೋ ಇದೆ.

3ಕೆಎಂಎನ್‌ಡಿ-4

ಕೆ.ಎಸ್.ವಿಜಯ್ ಆನಂದ್