ಸಮ್ಮೇಳನದಲ್ಲಿ 85 ವಿಚಾರ ಗೋಷ್ಠಿಗಳು ಮತ್ತು 900 ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಸಂಶೋಧನೆ, ಆಂತರಿಕ ಔಷಧ, ಹೃದ್ರೋಗ, ಸಾಂಕ್ರಾಮಿಕ ರೋಗಗಳು, ನಿರ್ಣಾಯಕ ಆರೈಕೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮುಂತಾದ ವೈವಿಧ್ಯಮಯ ವಿಷಯಗಳನ್ನುಈ ಸಮ್ಮೇ‍ಳನ ಒಳಗೊಂಡಿದೆ.

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಜೂ. 13, 14 ಮತ್ತು 15ರಂದು 42ನೇ ಕಾಪಿಕಾನ್ 2025 ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಾ. ಈಶ್ವರ ಹಸಬಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು. ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಎಸ್‌ಡಿಎಂ ಧಾರವಾಡ ಮತ್ತು ಕೆಎಲ್‌ಇ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕ ವೈದ್ಯರ ಸಂಘ ಹುಬ್ಬಳ್ಳಿ - ಧಾರವಾಡ ಶಾಖೆ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂ. 13ರಂದು ಸಂಜೆ 6ಕ್ಕೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು‌. ಡಾ. ಜ್ಯೋತಿರ್ಮಯ ಪಾಲ್ ಹಾಗೂ ಡಾ. ನರಸಿಂಹಲು ಭಾಗವಹಿಸುವರು.

ಸಮ್ಮೇಳನದಲ್ಲಿ 85 ವಿಚಾರ ಗೋಷ್ಠಿಗಳು ಮತ್ತು 900 ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಸಂಶೋಧನೆ, ಆಂತರಿಕ ಔಷಧ, ಹೃದ್ರೋಗ, ಸಾಂಕ್ರಾಮಿಕ ರೋಗಗಳು, ನಿರ್ಣಾಯಕ ಆರೈಕೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮುಂತಾದ ವೈವಿಧ್ಯಮಯ ವಿಷಯಗಳನ್ನುಈ ಸಮ್ಮೇ‍ಳನ ಒಳಗೊಂಡಿದೆ ಎಂದರು.

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವೈದ್ಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಸಂಶೋಧಕರು ಆರೋಗ್ಯ ಸೇವಾ ವೃತ್ತಿಪರರು ಸೇರಿದಂತೆ ಸುಮಾರು 1800ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ 1635 ಜನ ನೋಂದಾಯಿಸಿಕೊಂಡಿದ್ದಾರೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚಿನ ಪ್ರಗತಿಗಳು, ಹೊಸ ಅಭ್ಯಾಸಗಳು ಮತ್ತು ಉದಯೋನ್ಮುಖ ಸವಾಲುಗಳ ಚರ್ಚೆ ಸಮ್ಮೇಳನದ ಉದ್ದೇಶವಾಗಿವೆ. "ಯುನೈಟಿಂಗ್‌ ಮೈಂಡ್ಸ್‌, ಅಡ್ವಾನ್ಸಿಂಗ್‌ ಕೇರ್‌ ಈ ಸಮ್ಮೇಳನದ ಧ್ಯೇಯವಾಕ್ಯವಾಗಿದೆ ಎಂದರು.

ಕಾಪಿಕಾನ್ ಆಯೋಜನಾ ಸಮಿತಿಯ ಮುಖ್ಯ ಸಲಹೆಗಾರ ಡಾ. ಜಿ.ಬಿ. ಸತ್ತೂರ ಮಾತನಾಡಿ, ಈ ಸಮ್ಮೇಳನದಲ್ಲಿ ಪ್ರಮುಖವಾಗಿ ಮೂರು ಕಾರ್ಯಾಗಾರಗಳು ನಡೆಯಲಿವೆ. ಡಾ. ಸುನೀಲ್ ಕರಿ, ಡಾ. ರಾಜೀವ್ ಜೋಶಿ ಮತ್ತು ಅವರ ತಂಡದಿಂದ ಡಯಾಬೆಟಿಕ್‌ ಫುಟ್‌ ವರ್ಕ್‌ಶಾಪ್‌, ಡಾ. ಶೈಲೇಂದ್ರ ಡಿ.ಎಸ್, ಡಾ. ಗಂಗಾಧರ್ ಸಿ. ಪಾಟೀಲ್ ಮತ್ತು ತಂಡದಿಂದ ಚೆಸ್ಟ್ ಅಲ್ಟ್ರಾ ಸೋನೊಗ್ರಾಫಿ ಇನ್ ಕ್ರಿಟಿಕಲ್ ಕೇರ್, ಐಸಿಯು ಕಾರ್ಯಾಗಾರ ಮತ್ತು ಬೆಂಗಳೂರಿನ ಡಾ. ಪ್ರದೀಪ್ ರಂಗಪ್ಪ ಮತ್ತು ತಂಡ ಮೆಕ್ಯಾನಿಕಲ್‌ ವೆಂಟಿಲೇಷನ್‌ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಈ ವೇಳೆ 500ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಸ್ನಾತಕೋತ್ತರ ಪದವೀಧರರು ಪ್ರಸ್ತುತಪಡಿಸಲಿದ್ದಾರೆ. ಔಷಧ ಮಳಿಗೆಗಳು, ಇಳಕಲ್ ಸೀರೆ ಸೇರಿದಂತೆ 35ಕ್ಕೂ ಅಧಿಕ ಮಳಿಗೆಗಳನ್ನು ಸಮ್ಮೇಳನದಲ್ಲಿ ಕಾಣಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ರಾಘವೇಂದ್ರ ಬೆಳಗಾಂವ್ಕರ್, ಡಾ. ಚಂದ್ರಶೇಖರ, ಡಾ. ಉದಯ ಬಂಡೆ, ಡಾ. ಕಿರಣ, ಡಾ. ಅವಿನಾಶ ಇಟಗಿ ಸೇರಿದಂತೆ ಇತರರು ಹಾಜರಿದ್ದರು.