ಪುತ್ತೂರು: ನಗರದ ಒಳಚರಂಡಿ ವ್ಯವಸ್ಥೆ ಸಮರ್ಪಕಗೊಳಿಸುವ ಹಿನ್ನೆಲೆಯಲ್ಲಿ ನೆದರ್ಲ್ಯಾಂಡ್ ಮೂಲದ ತಾಂತ್ರಿಕತೆ ಬಳಸಿಕೊಂಡು ಕಂಪನಿಯೊಂದರ ಮೂಲಕ ಸುಮಾರು 6 ಕಿ.ಮೀ. ಸುತ್ತಳತೆಯಲ್ಲಿ ಪುತ್ತೂರು ನಗರದ ಒಳಚರಂಡಿ ವ್ಯವಸ್ಥೆಗೆ ರು. 50 ಕೋಟಿಯ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಪ್ರಸ್ತಾವನೆಗೆ ರಾಜ್ಯ ಸರಕಾರಕ್ಕೆ ಮಂಜೂರಾತಿ ನೀಡಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ದೇವಸ್ಥಾನದ ಬಳಿ ಮಹಿಳಾ ಪೊಲೀಸ್ ಠಾಣಾ ಕಡೆಯಿಂದ ಸ್ಮಶಾನದವರೆಗೆ ನಿರ್ಮಾಣಗೊಳ್ಳಲಿರುವ ಸುಮಾರು ರು. 3.50 ಕೋಟಿ ವೆಚ್ಚದ 30 ಅಡಿ ಅಗಲದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿ ಎಂಜಿನಿಯರ್ ಗಳಿಂದ ಶನಿವಾರ ಮಾಹಿತಿ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದರು.ಪುತ್ತೂರಿನ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿ ಈ ಹಿಂದೆ ಸುಮಾರು ರು. 200 ಕೋಟಿಗಳಲ್ಲಿ ಗ್ರಾವಿಟಿ ನೆಲೆಯಲ್ಲಿ ನೀರು ಹರಿಯುವ ವ್ಯವಸ್ಥೆಯ ಯೋಜನೆಗೆ ಡಿಪಿಆರ್ ಮಾಡಿದ್ದು, ಈ ಕುರಿತು ಅಧಿವೇಶನದಲ್ಲಿ ನಾನು ಪ್ರಶ್ನೆ ಮಾಡಿದಾಗ ಅದನ್ನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಬಂದಿತ್ತು. ಹೀಗಾಗಿ ಹೊಸ ತಾಂತ್ರಿಕತೆಯ ಮೂಲಕ ನಾವು ರು. 50 ಕೋಟಿಗಳ ಪ್ರಸ್ತಾವನೆ ಸಲ್ಲಿಸುವುದರ ಜೊತೆಗೆ ನಗರಾಭಿವೃದ್ಧಿ ಇಲಾಖೆ ಸಚಿವ ಡಾ.ಯತೀಂದ್ರ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದೇನೆ ಎಂದರು. ದೇವಸ್ಥಾನದ ಮ್ಯಾಸ್ಟರ್ ಪ್ಲಾನ್ ನಂತೆ ಮಹಿಳಾ ಪೊಲೀಸ್ ಠಾಣಾ ಕಡೆಯಿಂದ ಸ್ಮಶಾನದವರೆಗೆ 30 ಅಡಿ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು, ಶೀಘ್ರ ಕಾಮಗಾರಿ ಆರಂಭ ಮಾಡುತ್ತೇವೆ. ಆದರೆ ರಸ್ತೆ ನಿರ್ಮಿಸಿ ಅಗೆಯುವ ಕೆಲಸ ಆಗಬಾರದು ಎನ್ನುವ ಕಾರಣಕ್ಕೆ ಕಾಂಕ್ರೀಟ್ ರಸ್ತೆಯ ಜತೆಗೆ ಬೊಳುವಾರು ಭಾಗದಿಂದ ಬರುವ 6 ಕಿ.ಮೀ. ವ್ಯಾಪ್ತಿಯ ಕೊಳಚೆ ನೀರಿನ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿ ದೊಡ್ಡ ಪೈಪು ಅಳವಡಿಸುವ ಕಾರ್ಯ ಮಾಡಲಿದ್ದೇವೆ. ಮುಂದೆ ಒಳಚರಂಡಿ ಯೋಜನೆ ಅನುಷ್ಠಾನದ ಸಂದರ್ಭ ಅದಕ್ಕೆ ಸಂಪರ್ಕ ನೀಡಲಾಗುತ್ತದೆ ಎಂದು ಹೇಳಿದರು. ದೇವಸ್ಥಾನದ ಬಳಿ ಇರುವ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಸಂಬಂಧಿಸಿ ಈ ಹಿಂದೆ ಅವರಿಗೆ 9 ಸೆಂಟ್ಸ್ ಜಾಗ ಗುರುತಿಸಲಾಗಿದ್ದು, ಅದು ಸಾಕಾಗುವುದಿಲ್ಲ ಎಂದು ಹೇಳಿರುವುದಕ್ಕೆ 30 ಸೆಂಟ್ಸ್ ಜಾಗ ಗುರುತಿಸಿ ಶೀಘ್ರ ಮಂಜೂರಾತಿ ದೊರೆಯಲಿದೆ. ಬಳಿಕ ಠಾಣೆಯನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತಿತರರಿದ್ದರು.