ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ಪರಿಣಾಮವೋ ಎಂಬಂತೆ ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ ಆರು ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಆ ಮೂಲಕ ಕಳೆದ ಜನವರಿಯಿಂದ ಇದುವರೆಗೂ ಒಟ್ಟು 11 ವಿಧೇಯಕಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದಂತಾಗಿದೆ.
ಅವುಗಳಲ್ಲಿ ಕರ್ನಾಟಕ ಸಾರ್ವಜನಿಕ ಪರೀಕ್ಷಾ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವ ಕ್ರಮಗಳು) ವಿಧೇಯಕ, ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ (ತಿದ್ದುಪಡಿ) ವಿಧೇಯಕಗಳನ್ನು ಎರಡನೇ ಬಾರಿಗೆ ಹಿಂದಕ್ಕೆ ಕಳುಹಿಸಲಾಗಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಶಾಸಕರನ್ನು ನೇಮಕ ಮಾಡುವುದಕ್ಕೆ ಇದ್ದಂತಹ ತೊಡಕನ್ನು ನಿವಾರಿಸುವ ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ವಿಧೇಯಕ ಸೇರಿದಂತೆ ಕರ್ನಾಟಕ ಪುರಸಭೆಗಳು ಮತ್ತು ಕೆಲ ಇತರೆ ಕಾನೂನು (ತಿದ್ದುಪಡಿ) ವಿಧೇಯಕ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳನ್ನು ಕಳೆದ ಆ. 16 ಮತ್ತು 17ರಂದು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.
ಉಳಿದಂತೆ ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕ, ಕರ್ನಾಟಕ ನೋಂದಣಿ (ತಿದ್ದುಪಡಿ) ವಿಧೇಯಕಗಳನ್ನು ಕಳೆದ ಜು. 26ರಂದು ವಾಪಸು ಕಳುಹಿಸಲಾಗಿದೆ.
ರಾಜ್ಯಪಾಲರು ಕೇಳಿರುವ ಸ್ಪಷ್ಟನೆಗಳೇನು?:
ಸಹಕಾರ ಸಂಘಗಳ ಎಲ್ಲ ಸದಸ್ಯರಿಗೂ ಮತದಾನ ಹಕ್ಕು ನೀಡುವುದು ಹಾಗೂ ಸಹಕಾರ ಸಂಘಗಳ ಚುನಾವಣೆಗಾಗಿ ಪ್ರತ್ಯೇಕ ವಿಭಾಗ ರಚನೆ ಸೇರಿದಂತೆ ಇನ್ನಿತರ ಅಂಶಗಳುಳ್ಳ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2024ರಲ್ಲಿ ಸಾಕಷ್ಟು ಗೊಂದಲಗಳಿವೆ. ವಿಧೇಯಕವನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರು ನನಗೆ ಮನವಿ ಸಲ್ಲಿಸಿದ್ದಾರೆ ಹಾಗೂ ವಿಧೇಯಕದಲ್ಲಿನ ಅಂಶಗಳಿಗೆ ವ್ಯತಿರಿಕ್ತವಾದಂತಹ ನ್ಯಾಯಾಲಯದ ಆದೇಶಗಳಿವೆ. ಆ ಅಂಶಗಳ ಕುರಿತಂತೆ ಸೂಕ್ತ ಮಾಹಿತಿ ನೀಡಬೇಕು ಹಾಗೂ ಕಾನೂನು ಸಲಹೆಯನ್ನು ಪಡೆದು ಮತ್ತೊಮ್ಮೆ ವಿಧೇಯಕ ಸಲ್ಲಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಶಾಸಕರನ್ನು ನೇಮಕ ಮಾಡುವುದಕ್ಕೆ ಇದ್ದಂತಹ ತೊಡಕನ್ನು ನಿವಾರಿಸಲು ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದ್ದ ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ವಿಧೇಯಕದ ಬಗ್ಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧೇಯಕಕ್ಕೆ ಎರಡನೇ ತಿದ್ದುಪಡಿ ಮಾಡುವುದಕ್ಕಿಂತ ಮುಂಚೆ ಇದ್ದಂತಹ ಅಂಶಗಳನ್ನೇ ಮುಂದುವರಿಸುವಂತೆ ರಾಜ್ಯಪಾಲರು ಈ ಹಿಂದೆ ಸಲಹೆ ನೀಡಿದ್ದರು. ಅದನ್ನು ಪುರಸ್ಕರಿಸದ ಸರ್ಕಾರ ವಿಧೇಯಕಕ್ಕೆ ಎರಡನೇ ಬಾರಿ ತಿದ್ದುಪಡಿ ತಂದಿತ್ತು. ತಮ್ಮ ಹಿಂದಿನ ಅಭಿಪ್ರಾಯದ ಕುರಿತು ಮತ್ತೊಮ್ಮೆ ಸರ್ಕಾರದ ಪರಿಶೀಲಿಸಿ ತಿಳಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕದ ಅಗತ್ಯತೆಯನ್ನೇ ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಈಗಾಗಲೇ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾಯ್ದೆ 2024ನ್ನು ಜಾರಿಯಲ್ಲಿದೆ. ಅದರ ನಡುವೆಯೇ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ರೂಪಿಸಲಾಗಿದ್ದು, ಒಂದೇ ಉದ್ದೇಶದ ಎರಡು ವಿಧೇಯಕಗಳ ಅಗತ್ಯತೆ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಪ್ರೀಮಿಯಂ ಫ್ಲೋರ್ ಏರಿಯಾ ರೇಷ್ಯೋ (ಎಫ್ಎಆರ್) ನೀಡುವ ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ (ತಿದ್ದುಪಡಿ) ವಿಧೇಯಕದ ಬಗ್ಗೆ ಸಾಕಷ್ಟು ಅಸಮಧಾನ ವ್ಯಕ್ತಪಡಿಸಿರುವ ರಾಜ್ಯಪಾಲರು, ಎಫ್ಎಆರ್ ವಿತರಣೆಯಲ್ಲಿನ ಗೊಂದಲ, ಅದರ ಪರಿಣಾಮ ಸೇರಿದಂತೆ ಇನ್ನಿತರ ಅಂಶಗಳನ್ನು ಉಲ್ಲೇಖಿಸಿ ಸಮಗ್ರ ಮಾಹಿತಿ ನೀಡುವಂತೆ ವಿಧೇಯಕವನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಹೀಗೆ ಪ್ರತಿಯೊಂದು ಕಾಯ್ದೆಯಲ್ಲಿನ ಲೋಪ, ಕಾನೂನಾತ್ಮಕ ತೊಡಕು ಹಾಗೂ ಗೊಂದಲಗಳನ್ನು ಉಲ್ಲೇಖಿಸಿ ಅವುಗಳಿಗೆ ಸ್ಪಷ್ಟನೆ ಮತ್ತು ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಿ ವಿಧೇಯಕಗಳನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದಾರೆ.