ಅಗತ್ಯ ಸೇವೆಯಡಿ ಮತದಾನಕ್ಕೆ 688 ಮಂದಿ ನೋಂದಣಿ

| Published : Apr 02 2024, 01:02 AM IST

ಸಾರಾಂಶ

ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಮತದಾನದಿಂದ ದೂರ ಉಳಿಯಬಾರದು. ಈ ವರ್ಗದ ಮತದಾರರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮತ್ತು ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ನೀಡಿದೆ. ಅಗತ್ಯ ಸೇವೆಯಡಿ ದಾವಣಗೆರೆ ಕ್ಷೇತ್ರಕ್ಕೆ ಮತದಾನ ಮಾಡಲು 688 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಡಿಸಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ ।

- ಜಿಲ್ಲಾ ಕೇಂದ್ರದಲ್ಲಿ ಹಕ್ಕು ಚಲಾವಣೆಗೆ ಆಯೋಗ ಅವಕಾಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಮತದಾನದಿಂದ ದೂರ ಉಳಿಯಬಾರದು. ಈ ವರ್ಗದ ಮತದಾರರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮತ್ತು ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ನೀಡಿದೆ. ಅಗತ್ಯ ಸೇವೆಯಡಿ ದಾವಣಗೆರೆ ಕ್ಷೇತ್ರಕ್ಕೆ ಮತದಾನ ಮಾಡಲು 688 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಗತ್ಯ ಸೇವಾ ಇಲಾಖೆ ಮತದಾರರ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

85 ವರ್ಷ ಮೇಲ್ಪಟ್ಟವರಿಗೆ, ವಿಶೇಷಚೇತನರಿಗೆ ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗೆ ಮುಂಚಿತವಾಗಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ತಮ್ಮ ಮನೆಯಲ್ಲಿಯೇ ಮತದಾನ ಮಾಡುವರು. ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಲಭ್ಯ ಕೇಂದ್ರದಲ್ಲಿ ಮತದಾನಕ್ಕಿಂತ ಮುಂಚಿತವಾಗಿ ಚುನಾವಣಾಧಿಕಾರಿ ಕಚೇರಿಯಿಂದ ಸ್ಥಾಪಿಸಲಾಗುವ ಮತದಾನ ಸೌಲಭ್ಯ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವರು.

12ಡಿ ನಮೂನೆ ಮತದಾನ:

ಮನೆಯಲ್ಲಿಯೇ ಮತದಾನಕ್ಕೆ ಮತ್ತು ಅಗತ್ಯ ಸೇವಾ ಇಲಾಖೆ ಮತದಾರರಿಗೆ 12ಡಿ ನಮೂನೆ ವಿತರಣೆ ಮಾಡಿ ದೃಢೀಕರಣ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿಯ ಚುನಾವಣೆ ವಿಶೇಷವೆಂದರೆ, ಅಗತ್ಯ ಸೇವೆಯಲ್ಲಿ ತೊಡಗಿರುವ ವಿವಿಧ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಾನದಿಂದಲೇ ಇತರೆ ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದರೂ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಉದಾಹರಣೆಗೆ ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದರೂ ದಾವಣಗೆರೆಯಲ್ಲಿಯೇ ಮತದಾನ ಮಾಡಲು ಸೌಲಭ್ಯ ಕಲ್ಪಿಸಿದೆ. ಇದಕ್ಕಾಗಿ 12ಡಿ ನಮೂನೆಯನ್ನು ನೀಡಲಾಗುತ್ತದೆ. ಅದನ್ನು ಆಯಾ ಇಲಾಖೆ ನೋಡಲ್ ಅಧಿಕಾರಿಗಳ ಮೂಲಕ ಜಿಲ್ಲಾ ನೋಡಲ್ ಅಧಿಕಾರಿಗೆ ಮತದಾರರ ಗುರುತಿನ ಚೀಟಿಯೊಂದಿಗೆ ಹಾಗೂ ದೃಢೀಕರಣದೊಂದಿಗೆ ಸಲ್ಲಿಸಬೇಕಾಗುತ್ತದೆ. 12ಡಿ ಸಲ್ಲಿಸಲು ಆಯಾ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಿದ 5 ದಿನಗಳೊಳಗಾಗಿ ಸಲ್ಲಿಸಬೇಕು ಎಂಬ ನಿಯಮವಿದೆ.

ಅಗತ್ಯ ಸೇವಾ ಮತದಾರರ ನೋಂದಣಿ:

ದಾವಣಗೆರೆ ಕ್ಷೇತ್ರದಲ್ಲಿ ಕರ್ತವ್ಯ ಮಾಡುತ್ತಿದ್ದು, ಇಲ್ಲಿಯೇ ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡುವವರು 295, ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 393 ದಾವಣಗೆರೆ ಕ್ಷೇತ್ರದ ಮತದಾರರಾಗಿ ಮತದಾನ ಮಾಡಲು 12ಡಿ ನೀಡಿರುವರು. 444 ಮತದಾರರು ದಾವಣಗೆರೆ ಕ್ಷೇತ್ರ ವ್ಯಾಪ್ತಿಯ ಸಿಬ್ಬಂದಿಯಾಗಿದ್ದು ಇತರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಲು 12ಡಿ ನೋಂದಣಿ ಮಾಡಿಸಿದ್ದು, ಇವರೆಲ್ಲರೂ ದಾವಣಗೆರೆ ಕೇಂದ್ರ ಸ್ಥಾನದಲ್ಲಿಯೇ ಇತರೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾನ ಮಾಡುವರು.

ಮನೆಯಲ್ಲಿಯೇ ಮತದಾನ:

ದಾವಣಗೆರೆ ಕ್ಷೇತ್ರದಲ್ಲಿ 85 ವರ್ಷಕ್ಕಿಂತಲೂ ಹೆಚ್ಚಿರುವ 12837 ಮತದಾರರಿದ್ದಾರೆ. ಇವರಲ್ಲಿ 7665 ಮತದಾರರಿಗೆ 12ಡಿ ನಮೂನೆ ನೀಡಲಾಗಿದೆ. ವಿಶೇಷಚೇತನ ಮತದಾರರು ಕ್ಷೇತ್ರದಲ್ಲಿ 22831 ಇದ್ದು, ಇದರಲ್ಲಿ 16005 ವಿಶೇಷಚೇತನರಿಗೆ 12ಡಿ ನಮೂನೆ ನೀಡಲಾಗಿದೆ. ಈಗಾಗಲೇ ಮನೆಯಲ್ಲಿಯೇ ಮತದಾನ ಮಾಡಲು ಒಪ್ಪಿ ಸಲ್ಲಿಸಿರುವ ಮತದಾರರನ್ನು ಆನ್‌ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನಮೂದಿಸುವ ಕೆಲಸವನ್ನು ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಮಾಡುತ್ತಿದ್ದಾರೆ.

ಚುನಾವಣಾ ಸಿಬ್ಬಂದಿಗೆ ಇಡಿಸಿ:

ಮತದಾನ ಸಿಬ್ಬಂದಿಗೆ 12 ಮತ್ತು 12ಎ ಅಡಿಯಲ್ಲಿ ಚುನಾವಣಾ ಕರ್ತವ್ಯದಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮತದಾನ ಸಿಬ್ಬಂದಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಲ್ಲಿ ಅವರಿಗೆ 12ರಡಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಇದೇ ಲೋಕಸಭಾ ಕ್ಷೇತ್ರದ ಸಿಬ್ಬಂದಿಯಾಗಿದ್ದು ಮತದಾನದ ಕರ್ತವ್ಯಕ್ಕೆ ನೇಮಕವಾಗಿದ್ದಲ್ಲಿ 12ಎ ಅಡಿಯಲ್ಲಿ ಅವಕಾಶ ಕಲ್ಪಿಸಿ ಅವರು ಕರ್ತವ್ಯ ನಿರ್ವಹಿಸುವ ಮತಗಟ್ಟೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಹಾಗೂ ಸಹಾಯ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು.

- - - ಬಾಕ್ಸ್‌ ಶೇ.90ಕ್ಕಿಂತ ಹೆಚ್ಚು ಮತದಾನಕ್ಕೆ ಸೂಚನೆ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಹಿರಿಯ ನಾಗರಿಕರು, ವಿಶೇಷಚೇತನರು, ಚುನಾವಣಾ ಕರ್ತವ್ಯದಲ್ಲಿ ಇರುವರು ಹಾಗೂ ಅಗತ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಶೇ.90ಕ್ಕಿಂತಲೂ ಹೆಚ್ಚು ಮತದಾನದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಮತದಾನದಲ್ಲಿ ಯಾರು ಸಹ ಬಿಟ್ಟು ಹೋಗದಂತೆ ಮತ್ತು 12ಡಿ ನೀಡಿದವರಿಗೆ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಇಲ್ಲ. ಅಂತಹ ಮತದಾರರಿಗೆ ಮಾಹಿತಿ ಮೂಲಕ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಡಾ. ವೆಂ.ವಿ.ವೆಂಕಟೇಶ್‌ ಹೇಳಿದರು.

- - -

-1ಕೆಡಿವಿಜಿ38ಃ:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಗತ್ಯ ಸೇವಾ ಇಲಾಖೆ ಮತದಾರರ ನೋಡಲ್ ಅಧಿಕಾರಿಗಳ ಸಭೆ ನಡೆಯಿತು.