ಕನ್ನಡಪ್ರಭ ವಾರ್ತೆ ಮಂಡ್ಯ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ವಿವಿಧ ವರ್ಗಗಳ ನಿಗಮಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸುಮಾರು ೭ ಕೋಟಿ ರು. ವೆಚ್ಚದ ಸೌಲಭ್ಯ ವಿತರಿಸಲಾಗಿದೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಹಿಂದುಗಳಿದ ವರ್ಗಗಳ ನಿಗಮಗಳು ಆಯೋಜಿಸಿದ್ದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಾವಲಂಬಿ ಸಾರಥಿ, ಹೊಲಿಗೆ ಯಂತ್ರ, ಅರಿವು ಶೈಕ್ಷಣಿಕ ಸಾಲ ಹಾಗೂ ವಿದೇಶಿ ವಿದ್ಯಾವಿಕಾಸ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ ವಿವಿಧ ಹಿಂದುಳಿದ ವರ್ಗಗಳ ೧೧ ನಿಗಮಗಳಿಂದ ನನ್ನ ಕ್ಷೇತ್ರದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸುಮಾರು ೭ ಕೋಟಿ ರು. ಸಾಲ-ಸೌಲಭ್ಯ ಒದಲಾಗುತ್ತಿದೆ, ಶೇ.೫೦ರಷ್ಟು ಸಹಾಯಧನಲ್ಲಿ ಸೌಲಭ್ಯ, ನೇರಸಾಲಗಳನ್ನು ನೀಡಲಾಗುತ್ತಿದೆ ಎಂದು ನುಡಿದರು.

ಈ ಸೌಲಭ್ಯ ಪಡೆದ ರೈತರು, ನಿರುದ್ಯೋಗಿಗಳು, ತಾಯಂದಿರು ಸ್ವಉದ್ಯೋಗ ಮಾಡಿ, ಆರ್ಥಿಕ ಪ್ರಗತಿ ಕಾಣಲಿ, ಉತ್ತಮ ಜೀವನ ನಡೆಸಲಿಕ್ಕೆ ಆಧಾರವಾಗಿಸಿಕೊಳ್ಳಲಿ, ನಿಗಮಗಳ ವ್ಯವಸ್ಥಾಪಕ ಬೋರೇಗೌಡ ಅವರ ಶ್ರಮ, ಕಾಳಜಿ ಉತ್ತಮವಾಗಿದೆ ಎಂದರು.


ಉದ್ಯೋಗ ಮೇಳ ಸದುಪಯೋಗಕ್ಕೆ ಸಲಹೆ:

ಫೆ.೨೧ರಂದು ಮಂಡ್ಯದಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಸಿಯಿಂದ ಉನ್ನತ ಶಿಕ್ಷಣ, ವೃತ್ತಿಶಿಕ್ಷಣ ಪಡೆದವರಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಲಭ್ಯವಾಗಲಿವೆ, ಅಗತ್ಯವುಳ್ಳವರು, ಆಸಕ್ತಿಯುಳ್ಳವರು ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಸಿಇಒ ಕೆ.ಆರ್.ನಂದಿನಿ, ನಿಗಮಗಳ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಬಿಸಿಎಂ ಜಿಲ್ಲಾ ಅಧಿಕಾರಿ ಮಂಜುಳಾ, ಸಹಾಯಕ ಅಧಿಕಾರಿ ಪ್ರಸನ್ನಕುಮಾರ್, ಪ್ರದೀಪ್‌ಕುಮಾರ್, ಮುಖಂಡರಾದ ಕೆ.ಎಚ್.ನಾಗರಾಜು, ಕಾಳೇನಹಳ್ಳಿ ಮಂಜುನಾಥ್, ಎಂ.ಯಶಸ್, ಚಿಕ್ಕೇಗೌಡ, ನಾಗರಾಜು ಇತರರಿದ್ದರು.