ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧಿಕಾರಾವಧಿಯಲ್ಲಿ ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗಾಗಿ ₹8,810 ಕೋಟಿ ಅನುದಾನ ತಂದಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಬಸವಪ್ರಸಾದ ಜೊಲ್ಲೆ ಹೇಳಿದರು.ಕಾಗವಾಡ, ಶಿರಗುಪ್ಪಿ, ಮಂಗಸೂಳಿ, ಲೋಕೂರ, ಮಂಗಾವತಿ, ಮೋಳೆ ಹಾಗೂ ಐನಾಪುರ ಗ್ರಾಮಗಳಲ್ಲಿ ಶುಕ್ರವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ₹7,039 ಕೋಟಿ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ₹794 ಕೋಟಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ವಿವರಿಸಿದರು.
₹697 ಕೋಟಿ ರೈಲ್ವೆ ಇಲಾಖೆಯ ನಿಧಿ ಯೋಜನೆಯಡಿ ಬಳಸಿಕೊಳ್ಳಲಾಗಿದೆ. ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯಡಿ ₹74 ಕೋಟಿ ಅನುದಾನದಲ್ಲಿ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.ಉಜ್ವಲಾ ಗ್ಯಾಸ್ ಯೋಜನೆಯಡಿ ₹29.61 ಕೋಟಿ ಅನುದಾನದಲ್ಲಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ, ಪಿಎಂ ಮತ್ತು ಸಿಎಂ ಪರಿಹಾರ ನಿಧಿ ಯೋಜನೆಯಡಿ ₹1.88 ಕೋಟಿ ಅನುದಾನ, ಸ್ಥಳೀಯ ಅಭಿವೃದ್ಧಿ ನಿಧಿ ಅನುದಾನದಲ್ಲಿ ₹16.76 ಕೋಟಿಗಳಲ್ಲಿ ಆಂಬ್ಯುಲೆನ್ಸ್ ಮತ್ತು ₹2.82 ಕೋಟಿ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಮಾಡಲಾಗಿದೆ. ಜೊಲ್ಲೆ ಗ್ರುಪ್ನಿಂದ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಧುರಿಣರಾದ ಪ್ರಭಾಕರ ಚವ್ಹಾಣ, ಶಿವಾನಂದ ಪಾಟೀಲ, ಗಜಾನನ ಯರಂಡೋಲಿ, ದೀಪ ಪಾಟೀಲ, ಸಿದರಾಯ ಹುಂಡೇಕ, ಭೂತಾಳಿ ಥರಥರೆ, ಲಕ್ಷ್ಮಣ ಹಳಮನಿ, ತಾತ್ಯಂಭಟ್ಟ ಜೋಶಿ, ದೀಪಕ್ ಪಾಟೀಲ, ಕಾಕಾ ಪಾಟೀಲ, ಪ್ರಕಾಶ ಪಾಟೀಲ, ಶಿವಾನಂದ ನವಿನಾಳೆ, ಸದಾಶಿವ ಚೌಗಲಾ, ಅಮರ ಸಿಂಧೆ, ಕಲ್ಲಪ್ಪ ಬೊರಗಾಂವೆ, ಸತೀಶ ಕೊಳೇಕರ, ಆನಂದ ಕನವಿ, ದಿಪೀಲ್ ಬರಮವಡಿಯರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮೋದಿಯವರ ಆಡಳಿತದ 10 ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಪರಿಣಾಮ ವಿಶ್ವ ಗುರುವಾಗಿ ಹೊರಹೊಮ್ಮಿದೆ. ಈ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಬಿಜೆಪಿ ಪರ ಮತ ಚಲಾಯಿಸುವ ಮೂಲಕ ದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡೆಸಲು ಕೈ ಜೋಡಿಸೋಣ.- ಬಸವಪ್ರಸಾದ ಜೊಲ್ಲೆ,
ಬಿಜೆಪಿ ಯುವ ಮುಖಂಡ.