ಸಾರಾಂಶ
ಕಡೂರು, ಕ್ಷೇತ್ರದ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಲಕ್ಷ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕನ್ನಡಪ್ರಭ ವಾರ್ತೆ, ಕಡೂರು
ಕ್ಷೇತ್ರದ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಲಕ್ಷ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಕಡೂರು ವಿಧಾನಸಭಾ ವ್ಯಾಪ್ತಿಯ ಮತಿಘಟ್ಟ ಗ್ರಾಮದಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ದೇವಾಲಯದ ಮುಂದೆ ಜಲಜೀವನ್ ಮಿಷನ್ ಯೋಜನೆ ಹಾಗೂ ಶ್ರೀ ರೇವಣ ಸಿದ್ದೇಶ್ವರ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಮತಿಘಟ್ಟ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಅಪೂರ್ಣವಾಗಿದ್ದ ಶ್ರೀ ಗುರು ರೇವಣಸಿದ್ದೇಶ್ವರ ಸಮುದಾಯಭವನದ ಮುಂದುವರಿದ ಕಾಮಗಾರಿಗೆ ಈಗಾಗಲೇ 20 ಲಕ್ಷ ರು. ನೀಡಲಾಗಿದೆ. ಇನ್ನು ಹೆಚ್ಚುವರಿಯಾಗಿ 17 ಲಕ್ಷ ರು. ನೀಡುತ್ತೇನೆ ಸಂಪೂರ್ಣವಾಗಿ ಸಮುದಾಯ ಭವನ ಪೂರ್ಣಗೊಳಿಸುವಂತೆ ಕೆಆರ್ಐಡಿಎಲ್ ಸಂಸ್ಥೆಗೆ ನಿರ್ದೇಶನ ನೀಡಿದರು.ಮತಿಘಟ್ಟ, ದೇವರಹಳ್ಳಿ ಮತ್ತು ಕವಳೀಪುರ ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ 40 ಲಕ್ಷ ರು. ಗಳಲ್ಲಿ ಜಲಜೀವನ್ ಮಿಷನ್ನಿಂದ ಕಾಮಗಾರಿ ಆರಂಭವಾಗಲಿದೆ. ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರು ದೊರಕಲಿದೆ ಎಂದರು. ಮತಿಘಟ್ಟ ಸುತ್ತಮುತ್ತಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹಣ ಮಂಜೂರಾಗಿದ್ದು ಶೀಘ್ರದಲ್ಲೆ ಕಾಮಗಾರಿ ಆರಂಭ ವಾಗಲಿದೆ. ಮತಿಘಟ್ಟ ಗ್ರಾಪಂ ವ್ಯಾಪ್ತಿಗೆ ಸುಮಾರು ಒಂದು ಕೋಟಿ ರು.ಗಳ ಅನುದಾನ ನೀಡಿದಂತಾಗಿದೆ ಎಂದರು. ಹಿಂದಿನಿಂದಲೂ ಮತಿಘಟ್ಟ ಗ್ರಾಮಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಗುರು ರೇವಣ್ಣ ಸಿದ್ದೇಶ್ವರ ದೇವಾಲಯದ 13 ಗುಡಕಟ್ಟಿನ ಗೌಡರು ಹಾಗು 18 ಹರಿವಾಣದ ಬುದ್ಧಿವಂತರು ನಮ್ಮ ಬಂಧುಗಳಾಗಿದ್ದು ನನ್ನ ಸಕ್ರಿಯ ರಾಜಕೀಯಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ದೇವಾಲಯದ ಪ್ರಧಾನ ಅರ್ಚಕ ಶ್ರೀಕಂಠ ಒಡೆಯರ್ ಅವರ ಸಹಕಾರ ಮರೆಯುವಂತಿಲ್ಲ ಎಂದರು.ಗ್ರಾಮದಲ್ಲಿ ಎಲ್ಲ ಜಾತಿ ಧರ್ಮದ ಜನರು ಸಹೋದರರಂತೆ ಜೀವನ ಸಾಗಿಸುತ್ತಿದ್ದು ಯಾವುದೇ ಸಮಸ್ಯೆಗಳು ಬಂದರೂ ಒಂದಾಗಿ ಕೂಡಿ ಬಾಳುತ್ತಿರುವುದು ಮೆಚ್ಚುವಂತಹದ್ದು ಎಂದು ಗ್ರಾಮಸ್ಥರನ್ನು ಶಾಸಕರು ಅಬಿನಂದಿಸಿದರು.ಇದೇ ಸಂದರ್ಭದಲ್ಲಿ ಮತಿಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣ್ಣ, ದೇವಾಲಯ ಸಮಿತಿ ಅಧ್ಯಕ್ಷ ಶ್ರೀಕಂಠ ಒಡೆಯರ್, ಹಾಗೂ ರೇವಣ್ಣಸಿದ್ದೇಶ್ವರ ದೇವಾಲಯದ ಭಕ್ತ ಮಂಜುನಾಥ್ ಮಾತನಾಡಿದರು. ವಿವಿಧ ಗ್ರಾಮಗಳ ಮುಖಂಡರಾದ ಮಹೇಶ್ವರಪ್ಪ, ಕುಬೇರಪ್ಪ, ಕರಿಬಡ್ಡೆ ಶ್ರೀನಿವಾಸ್, ಮಂಜುನಾಥ್, ಎಲ್.ಎಂ. ಪರಮೇಶ್ವರಪ್ಪ, ಚಟ್ಟನಹಳ್ಳಿಶಿವು, ಕೀರ್ತಿಕುಮಾರ್, ಕರೆನಹಳ್ಳಿ ಬಾಬು, ಲಕ್ಕೇನಹಳ್ಳಿ ಕೃಷ್ಣಮೂರ್ತಿ, ಅಣ್ಣಪ್ಪ, ರೇಣುಕಪ್ಪ, ಆನಂದ್,ಕಲ್ಲೇಶ, ಮಹೇಂದ್ರಚಾರ್ ಮತ್ತಿತರು ಶಾಸಕರಿಗೆ ಸನ್ಮಾನಿಸಿದರು.ಕೆಆರ್ಐಡಿಎಲ್ನ ಗಿರೀಶ್ ಮತ್ತು ಗ್ರಾಮಸ್ಥರು ಇದ್ದರು.