ಕನ್ನಡಪ್ರಭ ವಾರ್ತೆ ಬೆಂಗಳೂರು
ತಮಗೆ ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಚಿನ್ನಾಭರಣ ತಯಾರಿಕೆ ಕಂಪನಿಯಲ್ಲೇ ಲಕ್ಷಾಂತರ ರು.ಒಡವೆ ಕಳವು ಮಾಡಿದ್ದ ಕಂಪನಿಯ 9 ಮಂದಿ ಕೆಲಸಗಾರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪಶ್ಚಿಮ ಬಂಗಾಳ ರಾಜ್ಯದ ಶೇಖ್ ಮೀರಾಜವುಲ್ ಇಸ್ಲಾಂ, ಗೋಲಂ, ಎಸ್.ಕೆ.ಮುಸ್ತಾಕ್ ಅಲಿ, ರಮಜಾನ್ ಮಿದ್ಯಾ, ಎಸ್.ಕೆ.ಮೆಹಬೂಬ್ ರೆಹಮಾನ್, ಎಸ್.ಕೆ.ಲಲನ್, ಆಸಿಕ್ ಅಲಿ, ಆಫೀಕ್ ಮೊಹಮ್ಮದ್ ಹಾಗೂ ಬಿಸ್ವಜಿತ್ ಬೌನಿಯಾ ಬಂಧಿತರು. ಆರೋಪಿಗಳಿಂದ 89 ಲಕ್ಷ ರು.ಮೌಲ್ಯದ 618 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಗರ್ತ್ ಪೇಟೆಯ ‘ಮೆಹ್ತಾ ಗೋಲ್ಡ್ ಕಂಪನಿ’ಯಲ್ಲಿ ಕಳ್ಳತನ ನಡೆದಿತ್ತು. ಈ ಕೃತ್ಯ ವರದಿಯಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕದ್ದು ರೈಲಿನಲ್ಲಿ ಪರಾರಿಹಲವು ವರ್ಷಗಳಿಂದ ನಗರ್ತ್ ಪೇಟೆಯಲ್ಲಿ ಚಿನ್ನಾಭರಣ ತಯಾರಿಕಾ ಕಂಪನಿಯನ್ನು ಸಂದೀಪ್ ಮೆಹ್ತಾ ನಡೆಸುತ್ತಿದ್ದು, 50ಕ್ಕೂ ಹೆಚ್ಚಿನ ಕೆಲಸಗಾರರು ದುಡಿಯುತ್ತಿದ್ದರು. ಕೆಲ ತಿಂಗಳಿಂದ ಮೆಹ್ತಾ ಬಳಿ ಆರೋಪಿಗಳ ಕೆಲಸ ಮಾಡುತ್ತಿದ್ದರು. ಆದರೆ ತಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲವೆಂದು ಕೆಲವರು ಅಸಮಾಧಾನಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಂಪನಿಯ ಮಾಲೀಕನಿಗೆ ತಿಳಿಯದಂತೆ ಚಿನ್ನಾಭರಣ ದೋಚಲು ಆರೋಪಿಗಳು ಸಂಚು ರೂಪಿಸಿದ್ದರು.
ಅಂತೆಯೇ ಮೇ.11 ರಂದು ರಾತ್ರಿ 10.50 ಗಂಟೆಗೆ ಕಂಪನಿಯಲ್ಲಿ 618 ಗ್ರಾಂ ಒಡವೆ ದೋಚಿದ್ದರು. ಆ ಆಭರಣಗಳನ್ನು ಎಕ್ಸಿಟ್ ಪ್ಯಾನ್ ಮೂಲಕ ಹೊರಗೆ ಬಿಸಾಕಿದ್ದರು. ಅಲ್ಲಿಂದ ಅವುಗಳನ್ನು ಎತ್ತಿಕೊಂಡು ರೈಲಿನಲ್ಲಿ ತಮ್ಮೂರಿಗೆ ಆರೋಪಿಗಳು ಪರಾರಿಯಾಗಿದ್ದರು. ಮರು ದಿನ ಘನನೆ ಬಗ್ಗೆ ಪೊಲೀಸರಿಗೆ ಮೆಹ್ತಾ ದೂರು ನೀಡಿದರು. ಕೂಡಲೇ ಕಾರ್ಯಾಚರಣೆಗಿಳಿದ ಹಲಸೂರು ಉಪ ವಿಭಾಗದ ಎಸಿಪಿ ಎಸ್.ಸುಧೀರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಬಿ.ಎನ್.ಅಶ್ವತ್ಥ್ನಾರಾಯಣ್ ಹಾಗೂ ಶಿವಪ್ಪ ನೇತೃತ್ವದ ಪಿಎಸ್ಐ ವಸಂತ್ ಕಾಳಗಿ ತಂಡವು ಆರೋಪಿಗಳನ್ನು ಬಂಧಿಸಿದೆ.
