ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಗುಂಡಾಪುರದ ಬೆಟ್ಟದತಪ್ಪಲಿನಲ್ಲಿ ನೆಲೆಸಿರುವ ಆರಾಧ್ಯ ದೇವತೆ ಬೆಟ್ಟದರಸಮ್ಮನ ಜಾತ್ರೆಯು ಅದ್ಧೂರಿಯಾಗಿ ತೆರೆಕಂಡಿತು.ಮಾ.12 ರ ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವವು ದೊಡ್ಡ ಜಾತ್ರೆ ಹಾಗೂ ಗುರುವಾರ ದನಗಳ ಜಾತ್ರೆಯೊಂದಿಗೆ ಸಂಭ್ರಮದಿಂದ ಜರುಗಿತು.
ನಂದಿಪುರ ಗ್ರಾಮಸ್ಥರಿಂದ ರಂಗ ಹುರಿಗಟ್ಟುವ ಕಾರ್ಯಕ್ರಮ, ತಟ್ಟೆ ಪೂಜೆ, ದೊಡ್ಡ ಜಾತ್ರೆ, ಕಡೇ ದಿನ ಗುರುವಾರ ದನ ಕರುಗಳನ್ನು ಜಾತ್ರೆ ಗೆ ಹಿಡಿದುಕೊಂಡು ಬಂದು ಊರ್ಜಿಗಳನ್ನು ಆಡಿಸಿ ಸಂಭ್ರಮಿಸಿದರು. ಈ ಜಾತ್ರೆಯಲ್ಲಿ ಪರದೇಶಿ ಕುಣಿತವು ವಿಶೇಷವಾಗಿ ನಡೆಯಿತು.ಗುರುವಾರ ಬೆಳಗಿನ ಜಾವ ಕರಗದ ಮನೆಯಿಂದ ದೇವರ ಕರಗವನ್ನು ಹೊತ್ತು ಬೆಟ್ಟದ ತಪ್ಪಲಿನಲ್ಲಿ ಕೊಂಡೋತ್ಸವಕ್ಕೆ ಹೆಬ್ಬಾರೆ ಜೊತೆಯಲ್ಲಿ ಹೊರಟಾಗ ಮುತ್ತೈದೆಯರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾ ಪ್ರತಿಯೊಬ್ಬರು ತಂಬಿಟ್ಟಿನ ಆರತಿ ಬೆಳಗಿಸಿ ಪೂಜೆ ಸಲ್ಲಿಸಿದರು.
ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತೆರಳಿ ಅರ್ಚಕರಾದ ವೀರಭದ್ರಪ್ಪ ದೇವರ ಕರಗವನ್ನು ಹೊತ್ತು ಕೊಂಡವನ್ನು ಹಾಯ್ದರು. ಈ ವೇಳೆ ಅರ್ಚಕರಾದ ಪುಟ್ಟಪ್ಪ, ವೀರತ್ತಪ್ಪ, ರಮೇಶ, ಪುಟ್ಟಮಲ್ಲಪ್ಪ, ಮಹದೇವಪ್ಪ, ಚನ್ನವೀರಪ್ಪ, ರಾಜು, ಚಂದ್ರಶೇಖರ್ ಪಾಲ್ಗೊಂಡಿದ್ದರು. ನಂತರ ಜಾತ್ರೆಗೆ ತೆರೆಕಂಡಿತು.ಹಲಗೂರು ಸೇರಿದಂತೆ ಗುಂಡಾಪುರ, ಎಚ್ ಬಸಾಪುರ, ಹಗಾದೂರು, ಕೆಂಪಯ್ಯನದೊಡ್ಡಿ , ನಂದಿಪುರ, ದಳವಾಯಿ ಕೋಡಿಹಳ್ಳಿ, ಬಾಳೆಹೊನ್ನಿಗ, ಹೊನಗಹಳ್ಳಿ ಸೇರಿದಂತೆ ಇನ್ನು ಸುತ್ತಮುತ್ತಲಿನ ಗ್ರಾಮದವರು ಶ್ರದ್ದಾ ಭಕ್ತಿಯಿಂದ ಜಾತ್ರೆ ಮಹೋತ್ಸವದಲ್ಲಿ ಪಾಲ್ಗೊಂಡರು.
ಇಂದು ಪೂಜಾ ಮಹೋತ್ಸವಕೆ.ಎಂ.ದೊಡ್ಡಿ: ಸಮೀಪದ ಮೆಳ್ಳಹಳ್ಳಿ ಶ್ರೀ ಶನೇಶ್ವರಸ್ವಾಮಿ 73ನೇ ವರ್ಷದ ವಿಶೇಷ ಪೂಜಾ ಮಹೋತ್ಸವ ಮಾ.21 ರಂದು ಆರಂಭವಾಗಲಿದೆ. ಪ್ರತಿ ವರ್ಷದಂತೆ ಶ್ರೀ ವಿಶ್ವಾವಸುನಾಮ ಸಂವತ್ಸರ ಪಾಲ್ಗುಣ ಮಾಸದ ಶುಕ್ರವಾರ ಹೋಮ, ನವಗ್ರಹ ಪೂಜೆ, ಗಣಪತಿ ಹೋಮ ಇತ್ಯಾದಿಗಳು ಜರುಗಲಿವೆ. ಮಾ.22 ರಂದು ಬೆಳಗ್ಗೆ 7.30 ರಿಂದ ಅಭಿಷಕ ಪೂಜೆ ಮಹಾಮಂಗಳಾರತಿ, ಬೆಳಗ್ಗೆ 10.30 ರಿಂದ ವಿಶೇಷ ಪೂಜೆ , ಮಧ್ಯಾಹ್ನ 12.30 ರಿಂದ ಬಾಯಿಬೀಗ, ಮುಡಿಸೇವೆ, ಮತ್ತು ಶ್ರೀ ಶನೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ ಮಧ್ಯಾಹ್ನ2.30 ರಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪಕ ಪೂಜಾರಿ ಮಹೇಶ್ ತಿಳಿಸಿದ್ದಾರೆ.