ಸಾರಾಂಶ
ಬೆಂಗಳೂರು : ರಸ್ತೆ ಬದಿ ಶೌಚಕ್ಕೆ ಕುಳಿತಿದ್ದ ಆರು ವರ್ಷದ ಬಾಲಕನ ಮೇಲೆಯೇ ಸರಕು ಸಾಗಣೆ ವಾಹನದ ಚಕ್ರ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿನೋಭಾನಗರದ ಕೆಎಚ್ಬಿ ಕಾಲೋನಿಯ ಕೊಳಗೇರಿಯ ಅಶ್ವಂತ್ (6) ಮೃತ ದುರ್ದೈವಿ. ಸಿದ್ದಯ್ಯ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ 11.15ರ ಸುಮಾರಿಗೆ ಈ ಘಟನೆ ನಡೆದಿದೆ.
ಕೊಳಗೇರಿ ನಿವಾಸಿ ಶಶಿಕುಮಾರ್ ಎಂಬುವವರ ಪುತ್ರ ಅಶ್ವಂತ್ ಬೆಳಗ್ಗೆ ಸಿದ್ದಯ್ಯ ರಸ್ತೆಯ ಬದಿ ಶೌಚಕ್ಕೆ ಕುಳಿತ್ತಿದ್ದ. ಈತನ ಹಿಂಭಾಗವೇ ಸರಕು ಸಾಗಣೆ ವಾಹನ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಚಾಲಕ ವಾಹನದ ಹಿಂಭಾಗ ಬಾಲಕ ಶೌಚಕ್ಕೆ ಕುಳಿತಿರುವುದನ್ನು ಗಮನಿಸದೆ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಈ ವೇಳೆ ಬಾಲಕನ ಮೇಲೆಯೇ ವಾಹನದ ಹಿಂಬದಿ ಚಕ್ರ ಹರಿದ ಪರಿಣಾಮ ಆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸರಕು ಸಾಗಣೆ ವಾಹನ ಚಾಲಕನ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ವಾಹನವನ್ನು ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.