ಕೊಳ್ಳೇಗಾಲದಲ್ಲಿ ವಿಷಪೂರಿತ ಕಾಯಿ ಸೇವನೆಯಿಂದ ಬಾಲಕ ಗಂಭೀರ, ಹಲವರು ಅಸ್ವಸ್ಥ

| Published : Nov 28 2024, 12:33 AM IST

ಸಾರಾಂಶ

ವಿಷಪೂರಿತ ಕಾಯಿ ತಿಂದು ವಾಂತಿ ಭೇದಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ 12 ಮಂದಿ ಕೂಲಿ ಕಾರ್ಮಿಕರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ಜರುಗಿದೆ. ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡ ಗ್ರಾಮದ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

ಮಕ್ಕಳು ಸೇರಿ 12 ಮಂದಿಗೆ ಅನಾರೋಗ್ಯ । ಆಸ್ಪತ್ರೆಗೆ ದಾಖಲು । ಪೊಲೀಸ್‌ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿಷಪೂರಿತ ಕಾಯಿ ತಿಂದು ವಾಂತಿ ಭೇದಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ 12 ಮಂದಿ ಕೂಲಿ ಕಾರ್ಮಿಕರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ಜರುಗಿದೆ. ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡ ಗ್ರಾಮದ ಯುವರಾಜು (4), ವೆಂಕಟೇಶ್ (8), ಪ್ರೀತಮ್ (10), ಪವನ್ (10), ಅನುಷಾ (10), ಅಂಕಿತಾ (10), ಅರ್ಜುನ(10), ಬದ್ರಿಬಾಯಿ (32), ಸೀತಾಬಾಯಿ (48) , ಲಕ್ಷ್ಮೀ (35) ಸರಸ್ವತಿ (42), ಲಲಿತಾ (45) ಅಸ್ವಸ್ಥಗೊಂಡವರು.

ಸರ್ಕಾರಿ ಆಸ್ಪತ್ರೆಯ ಡಾ.ಶೃತಿ, ಡಾ.ಸೌಮ್ಯ, ಡಾ.ವೈಭವ್, ಇತರರು ಸಕಾಲದಲ್ಲಿ ಚಿಕಿತ್ಸೆ ನೀಡಿದ್ದಾರೆ. ಯುವರಾಜ್ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ಆತನ ಸ್ಥಿತಿಯು ಚಿಂತಾಜನಕವಾಗಿದ್ದು ಸಂಜೆಯಷ್ಟರಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ

ಈ ಸಂಬಂಧ ಗ್ರಾಮಾಂತರ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತರ ಬಳಿ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.

ಏನಿದು ಘಟನೆ?:

ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ಬಳಿ ಕಬ್ಬು ಕಟಾವು ಮಾಡಲು ಒಂದು ತಿಂಗಳ ಹಿಂದೆ ಆಗಮಿಸಿದ್ದ 3 ಕುಟುಂಬ ಎಂದಿನಂತೆ ಬುಧವಾರ ಕಬ್ಬು ಕಟಾವು ಮಾಡಲು ತೆರಳಿದ್ದರು. ಪಕ್ಕದಲ್ಲಿ ಆಟವಾಡುತ್ತಿದ್ದ ಅನುಷಾ ಎಂಬ ಬಾಲಕಿ ಮರಳ ಕಾಯಿ ತಿಂದು ಸಿಹಿಯಾಗಿದೆ ಎಂದಾಗ ಜತೆಯಲ್ಲಿದ್ದರು ಕಾಯಿಯ ಒಳಗಡೆಯ ಬೀಜವನ್ನು ತಿಂದಿದ್ದಾರೆ. ಮಕ್ಕಳು ಸಿಹಿ ಕಾಯಿ ಅನ್ನುತ್ತಿದ್ದಂತೆ ಮಕ್ಕಳ ಪೋಷಕರು ಸಹ ಕಾಯಿ ಮತ್ತು ಬೀಜ ಸೇವಿಸಿದ್ದರು.

ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಸೇರಿ 12 ಮಂದಿಗೂ ವಾಂತಿ ಭೇದಿ ಕಾಣಿಸಿಕೊಂಡಿದೆ. ಬಳಿಕ ಜತೆಯಲ್ಲಿದ್ದ ಇನ್ನುಳಿದ ಕೂಲಿ ಕಾರ್ಮಿಕರು ಆಟೋ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು.