ಸಮುದ್ರ ಮಧ್ಯೆ ಬೆಂಕಿ ಅವಘಡಕ್ಕೆ ಒಳಗಾಗಿ ಪಾರಾದ ಸರಕು ನೌಕೆ ಸುರತ್ಕಲ್‌ ಬಳಿ ಲಂಗರು

| Published : Jul 27 2024, 12:55 AM IST

ಸಮುದ್ರ ಮಧ್ಯೆ ಬೆಂಕಿ ಅವಘಡಕ್ಕೆ ಒಳಗಾಗಿ ಪಾರಾದ ಸರಕು ನೌಕೆ ಸುರತ್ಕಲ್‌ ಬಳಿ ಲಂಗರು
Share this Article
  • FB
  • TW
  • Linkdin
  • Email

ಸಾರಾಂಶ

ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಓರ್ವ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಪ್ರಸಕ್ತ ಹಡಗು ಸುರತ್ಕಲ್‌ ಕಡಲ ತೀರದಿಂದ ಸುಮಾರು 33 ನಾಟಿಕಲ್‌ ಮೈಲ್ ದೂರದಲ್ಲಿ ಲಂಗರು ಹಾಕಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಗುಜರಾತಿನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ ಹಡಗು ಮಂಗಳೂರಿನ ಎನ್‌ಎಂಪಿಟಿಗೆ ಸಮೀಪವಿರುವ ಸುರತ್ಕಲ್ ಬಳಿ ಸಮುದ್ರದ ಮಧ್ಯದಲ್ಲಿ ಲಂಗರು ಹಾಕಿದೆ.

ಕಾರವಾರ ಬಳಿ ಕೋಸ್ಟ್‌ಗಾರ್ಡ್‌ ತಂಡ ಹೆಲಿಕಾಪ್ಟರ್‌ ಮತ್ತು ಹಡಗು ಮೂಲಕ ಸತತ 40 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಓರ್ವ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಪ್ರಸಕ್ತ ಹಡಗು ಸುರತ್ಕಲ್‌ ಕಡಲ ತೀರದಿಂದ ಸುಮಾರು 33 ನಾಟಿಕಲ್‌ ಮೈಲ್ ದೂರದಲ್ಲಿ ಲಂಗರು ಹಾಕಿದೆ. ಜು.19ರಂದು ಹಡಗಿನಲ್ಲಿ ಸಂಭವಿಸಿದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹಾಗೂ ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್ ಖಚಿತಪಡಿಸಿದ್ದಾರೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದರೂ, ಮತ್ತೊಮ್ಮೆ ಬೆಂಕಿ ಕಾಣಿಸಿಕೊಳ್ಳುವ, ಇದರಿಂದ ಹಡಗು ಸಂಪೂರ್ಣ ಹಾನಿಗೊಂಡು ಮುಳುಗುವ ಹಾಗೂ ಅದರಲ್ಲಿರುವ ತೈಲ ಸೋರಿಕೆಯಾಗಿ ಸಮುದ್ರ ಸೇರುವ ಅಪಾಯ ಇರುವುದರಿಂದ ಸಮುದ್ರ ಮಾಲಿನ್ಯವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ವ್ಯಾಪಿಸುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಯಾವುದೇ ಅಂತಹ ಸೂಚನೆ ಕಂಡುಬಂದರೂ ಮಾಹಿತಿ ನೀಡುವಂತೆ ಡಿಸಿ ಹಾಗೂ ಎಸ್ಪಿ ತಿಳಿಸಿದ್ದಾರೆ.

ಈ ಕುರಿತಂತೆ ಎಸ್ಪಿ ಮಿಥುನ್, ಹಡಗಿನಲ್ಲಿ ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದೆ. ಸದ್ಯಕ್ಕೆ ಯಾವುದೇ ತೈಲ ಸೋರಿಕೆಯಾಗಿಲ್ಲ, ತಜ್ಞರ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟವರು ನಿರ್ಧರಿಸುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ನೌಕೆಯಿಂದ ಸದ್ಯ ಅಪಾಯ ಇಲ್ಲ: ದ.ಕ. ಡಿಸಿ

ಮಂಗಳೂರು: ಸುರತ್ಕಲ್‌ ತೀರದ ಸಮುದ್ರ ಮಧ್ಯೆ ಲಂಗರು ಹಾಕಿರುವ ಸರಕು ನೌಕೆಯಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ದ.ಕ. ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಮಾರ್ಗದರ್ಶನ ಮತ್ತು ನೆರವಿನೊಂದಿಗೆ ಸಂಭಾವ್ಯ ಅವಘಡವನ್ನು ಎದುರಿಸಲು ಲಭ್ಯವಿರುವ ಉಪಕರಣಗಳು, ಸಲಕರಣೆಗಳು ಮತ್ತು ಮಾನವ ಸಂಪನ್ಮೂಲದೊಂದಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.