ಸಾರಾಂಶ
ದಾಬಸ್ಪೇಟೆ: ನೆಲಮಂಗಲ ತಾಲೂಕಿನ ಸೊಳ್ಳೆಗುಟ್ಟೆ ಗ್ರಾಮದಲ್ಲಿ ಕೃಷಿ ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಮಗು ಕೆಳಗೆ ಬಿದ್ದು, ಟ್ರ್ಯಾಕ್ಟರ್ನ ರೋಟರಿ ಟಿಲ್ಲರ್ನ ಬ್ಲೇಡ್ ಗೆ ಸಿಲುಕಿ ಮೃತಪಟ್ಟಿದೆ. ಬಾವಿಕೆರೆ ಗ್ರಾಮದ ಸೊಳ್ಳೆ ಗುಟ್ಟೆಯ ರೈತ ಭರತ್ ಮಗ ನಂದನ್(4) ಮೃತಪಟ್ಟ ಮಗು. ರೈತ ಭರತ್ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರ್ ಕರೆಸಿದ್ದರು. ಆ ಟ್ರ್ಯಾಕ್ಟರ್ನಲ್ಲಿ ಭರತ್- ಚೈತ್ರಾ ದಂಪತಿಯ ೪ ವರ್ಷದ ಮಗ ನಂದನ್ ಕುಳಿತಿದ್ದಾಗ ಆಯತಪ್ಪಿ ರೋಟರಿ ಟಿಲ್ಲರ್ ಮೇಲೆ ಬಿದ್ದಿದ್ದಾನೆ. ನಂದನ್ ತಲೆ ರೋಟರಿ ಟಿಲ್ಲರ್ನ ಬ್ಲೇಡ್ಗೆ ತಗುಲಿ ತಲೆಯ ಒಂದು ಭಾಗ ಕತ್ತರಿಸಿ, ಸ್ಥಳದಲ್ಲೇ ನಂದನ್ ಮೃತಪಟ್ಟಿದ್ದಾನೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ವಶಕ್ಕೆ ಪಡೆದು ಚಾಲಕನ ಮಾಹಿತಿ ಕಲೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜು ಹಾಗೂ ಡಿವೈಎಸ್ಪಿ ಜಗದೀಶ್, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.