ರಾಣಿಬೆನ್ನೂರು: ಯಾವೊಬ್ಬ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೂ.30ರಿಂದ ಜು. 29ರ ವರೆಗೆ ಬೂತ್ ಮಟ್ಟದ ಬಿಎಲ್‌ಓ ಗಳು ಮನೆ ಮನೆ ಭೇಟಿ ನೀಡಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮಾಡಲಿದ್ದಾರೆ. ಈ ಸಮಯದಲ್ಲಿ ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ಮತದಾರರ ಪಟ್ಟಿಯಲ್ಲಿನ ಗುರುತಿನ ಚೀಟಿ ಖಚಿತಪಡಿಸಿಕೊಳ್ಳಬೇಕು ಎಂದರು.

ಇಲ್ಲಿಂದ ಹೊರಟ ಜಾಥಾ ಪೋಸ್ಟ್ ವೃತ್ತದ ಮೂಲಕ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಸಂಗಮ್ ವೃತ್ತದ ಮಾರ್ಗವಾಗಿ ತಾಲೂಕು ಪಂಚಾಯತ್ ಆವರಣಕ್ಕೆ ಬಂದು ಸಮಾರೋಪಗೊಂಡಿತು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಜಾಥಾದಲ್ಲಿ ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ. ಅಡಿವೆರ, ಎಡಿಪಿಆರ್ ಡಿ.ಡಿ. ಗೊಂದಿ, ಯುಟಿಪಿ ಎಇಇ ಆನಂದ ಕುಲಕರ್ಣಿ, ಬಿಇಒ ಎಸ್.ಎಸ್.ಅಡಿಗ, ಪಿಡಬ್ಲ್ಯೂಡಿ ಎಇಇ ಜಗದೀಶ್ ಕೋಳಿವಾಡ, ಪಿಆರ್‌ಇಡಿ ಎಇಇ ರಮೇಶ ಕುರವತ್ತಿ, ಸಿಡಿಪಿಓ ಪಾರ್ವತಿ ಹುಂಡೇಕಾರ, ಶಿಕ್ಷಣ ಇಲಾಖೆಯ ಎಸ್.ಎಂ. ಬನ್ನಿಕೋಡ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಬಿಎಲ್‌ಓಗಳು, ಆಶಾ ಕಾರ್ಯಕರ್ತರು, ವಿವಿಧ ಇಲಾಖಾ ಸಿಬ್ಬಂದಿ, ಶಾಲಾ ಮಕ್ಕಳು ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.