ಸಾರಾಂಶ
ಪಶು ಆಸ್ಪತ್ರೆಯ ಸಹಾಯಕ ಅದ್ವೈತ್ ಭಟ್ ಸಹಾಯದಿಂದ ಅರ್ಧಗಂಟೆಯಲ್ಲಿ ಚಾಕುವನ್ನು ಹಾವಿನ ಹೊಟ್ಟೆಯಿಂದ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ
ಕುಮಟಾ: ಹರಿತವಾದ ಚಾಕುವನ್ನು ಆಹಾರವೆಂದು ಭ್ರಮಿಸಿ ನುಂಗಿ ಇತ್ತ ಜೀರ್ಣಿಸಿಕೊಳ್ಳಲಾಗದೇ ಅತ್ತ ಹೊರ ಹಾಕಲೂ ಆಗದೇ ಒದ್ದಾಡುತ್ತಿದ್ದ ನಾಗರ ಹಾವಿನಿಂದ ಉದ್ದ ಚಾಕುವನ್ನು ಹೊರ ತೆಗೆದು ಸಂರಕ್ಷಿಸಿದ ಘಟನೆ ತಾಲೂಕಿನ ಹೆಗಡೆಯಲ್ಲಿ ಸೋಮವಾರ ನಡೆದಿದೆ.
ಹಾವುಗಳು ತಮ್ಮ ಆಹಾರವಾದ ಚಿಕ್ಕ ಪ್ರಾಣಿಗಳನ್ನು ನುಂಗುವುದು ಮಾಮೂಲಿ ಸಂಗತಿ. ಆದರೆ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕ ಅವರ ಮನೆಯಲ್ಲಿ ಕಾಣಿಸಿಕೊಂಡ ನಾಗರ ಹಾವು ಅಡುಗೆ ಮನೆಯಲ್ಲಿ ಬಿದ್ದಿದ್ದ ಮರದ ಹಿಡಿಕೆಯ ಚಾಕುವನ್ನು ಆಹಾರವೆಂದು ಭ್ರಮಿಸಿದೆ. ಅಡುಗೆಮನೆಯಲ್ಲಿ ನಾಗರಹಾವು ಓಡಾಡುತ್ತಿದ್ದರಿಂದ ಒಳಹೋಗಲು ಹೆದರಿದ್ದ ಮನೆಮಂದಿಗೆ ಕೆಲ ಸಮಯದಲ್ಲೇ ಹಾವು ಒಂದೆಡೆ ವಿಶ್ರಾಂತ ಸ್ಥಿತಿಯಲ್ಲಿ ಮಲಗಿಕೊಂಡಿರುವುದು ಕಂಡುಬಂದಿದೆ. ಆದರೆ ಅಲ್ಲಿ ಬಿದ್ದು ಕೊಂಡಿದ್ದ ಚಾಕು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು.ಕೂಡಲೇ ಉರಗತಜ್ಞ ಪವನ ನಾಯ್ಕ ಅವರನ್ನು ಕರೆಸಿದಾಗ ಹಾವು ಚಾಕುವನ್ನು ನುಂಗಿರುವುದನ್ನು ಖಚಿತಪಡಿಸಿಕೊಂಡ ಪವನ ನಾಯ್ಕ, ಚಾಕುವಿನ ತುದಿ ಹಾವಿನ ಎದೆಯ ಹತ್ತಿರ ಸಿಲುಕಿಕೊಂಡಿದ್ದು ಹೊರಹಾಕಲು ಹಾವು ಒದ್ದಾಡುತ್ತಿದೆ. ಚಾಕು ಹೊರ ತೆಗೆಯದಿದ್ದರೆ ಹಾವು ಸಾಯುತ್ತದೆ ಎಂದು ತಿಳಿಸಿದರು.
ನಂತರ ಪಶು ಆಸ್ಪತ್ರೆಯ ಸಹಾಯಕ ಅದ್ವೈತ್ ಭಟ್ ಸಹಾಯದಿಂದ ಅರ್ಧಗಂಟೆಯಲ್ಲಿ ಚಾಕುವನ್ನು ಹಾವಿನ ಹೊಟ್ಟೆಯಿಂದ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಚಾಕು ಬರೋಬ್ಬರಿ ೧೪ ಇಂಚು ಉದ್ದವಿದ್ದು ಇಡೀ ಚಾಕುವನ್ನು ಹಾವು ನುಂಗಿರುವುದು ಅಚ್ಚರಿಗೆ ಕಾರಣವಾಯಿತು.ನಂತರ ಪವನ ನಾಯ್ಕ ನಾಗರ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಿದರು.