ಸಾರಾಂಶ
ಗಜೇಂದ್ರಗಡ: ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹವಣಿಸುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರು ಪ್ರಜಾಪ್ರಭುತ್ವದ ಸರ್ಕಾರವನ್ನು ಕಿತ್ತು ಹಾಕಲು ನಡೆಸುತ್ತಿರುವ ಸಂಚನ್ನು ಖಂಡಿಸಿ ಪಟ್ಟಣದಲ್ಲಿ ಆ. 27 ರ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಇಲ್ಲಿನ ಅಹಿಂದ ಸಮುದಾಯದ ಮುಖಂಡರು ಹೇಳಿದರು.
ಸ್ಥಳೀಯ ರೋಣ ರಸ್ತೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಅಹಿಂದ ಸಮುದಾಯದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದ ಜನಸಾಮಾನ್ಯರು, ಬಡವರು, ಶೋಷಿತ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ೨ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ಅಹಿಂದ ವರ್ಗದ ನೇತಾರರಾಗಿದ್ದಾರೆ.ದೇಶದ ಜನಪ್ರೀಯ ಮುಖ್ಯಮಂತ್ರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ರಾಜ್ಯದ ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ಹಾಗೂ ಆಡಳಿತದಲ್ಲಿನ ಜನಪರ ಕಾಳಜಿ ಸಹಿಸಿಕೊಳ್ಳದ ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ರಾಜ್ಯದಲ್ಲಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಎಂದು ದೂರಿದರು.
ರಾಜ್ಯದ ಜನರ ಸರ್ವಾಂಗೀಣ ಏಳ್ಗೆಗಾಗಿ ಉಚಿತ ಬಸ್ ಪ್ರಯಾಣ, ಮನೆಗಳಿಗೆ ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ವೇತನ, ಅನ್ನಭಾಗ್ಯ ಮೂಲಕ ಜನರ ಹಸಿವು ನೀಗಿಸುತ್ತಿರುವ ಸಿಎಂ ಸಿದ್ದರಾಮಯ್ಯ ದಕ್ಷ ಹಾಗು ಪ್ರಾಮಾಣಿಕ ಆಡಳಿತಗಾರರು. ಅವರ ರಾಜಕೀಯ ಜೀವನದಲ್ಲಿ ಜನಪರ ಹಾಗು ರೈತಪರ ಆಡಳಿತ ನೀಡುತ್ತಾ ಜನರ ಮನಸ್ಸು ಗೆದ್ದಿರುವ ಸಿದ್ದರಾಮಯ್ಯ ಅವರ ಸರ್ಕಾರ ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸುಳ್ಳು ಆರೋಪಗಳಿಗೆ ಕಿವಿಕೊಟ್ಟಿರುವ ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ಗಜೇಂದ್ರಗಡ ತಾಲೂಕು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯಗಳು ಹಾಗೂ ಪ್ರಗತಿಪರರು ತೀವ್ರವಾಗಿ ಖಂಡಿಸುತ್ತವೆ. ಹೀಗಾಗಿ ಪ್ರಜಾಪ್ರಭುತ್ವ ಸರ್ಕಾರ ಕಿತ್ತು ಹಾಕಲು ನಡೆಸುತ್ತಿರುವುದನ್ನು ಖಂಡಿಸಿ ತಾಲೂಕು ಅಹಿಂದ ಸಮುದಾಯದಿಂದ ಆ. 27 ಮಂಗಳವಾರ ಬೆಳಗ್ಗೆ 9.30ಕ್ಕೆ ಇಲ್ಲಿನ ಎಪಿಎಂಸಿ ಆವರಣದಿಂದ ದುರ್ಗಾ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಲಕಾಲೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಹೀಗಾಗಿ ಹೋರಾಟಕ್ಕೆ ಪ್ರಗತಿಪರ, ದಲಿತಪರ, ಕನ್ನಡಪರ, ರೈತಪರವಿರುವ ಎಲ್ಲ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಮುಖಂಡರು ಮನವಿ ಮಾಡಿದರು.
ಮುಖಂಡರಾದ ವಿ.ಆರ್. ಗುಡಿಸಾಗರ, ಅಶೋಕ ಬಾಗಮಾರ, ಎಚ್.ಎಸ್. ಸೋಂಪುರ, ರವಿ ಗಡೇದವರ, ಶರಣು ಪೂಜಾರ, ಸುಭಾನಸಾಬ್ ಆರಗಿದ್ದಿ, ಪ್ರಶಾಂತ ರಾಠೋಡ, ಕೆ.ಎಸ್. ಕೊಡತಗೇರಿ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಎಫ್.ಎಸ್. ಕರಿದುರಗನವರ, ಅಂದಪ್ಪ ಬಿಚ್ಚೂರ, ಅಜ್ಜಪ್ಪ ವಂದಕುದರಿ, ಉಮೇಶ ರಾಠೋಡ, ಇಮಾಮಸಾಬ್ ಬಾಗಮಾನ ಸೇರಿ ಇತರರು ಇದ್ದರು.