ಸಾರಾಂಶ
ಧಾರವಾಡ ಅಂಜುಮನ್ ಇಸ್ಲಾಂ ಅಧ್ಯಕ್ಷ ತಮಟಗಾರ ಹೇಳಿಕೆ
ಕನ್ನಡಪ್ರಭ ವಾರ್ತೆ ಧಾರವಾಡಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಹತಾಶೆಗೊಂಡು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಹುಚ್ಚು ಹಿಡಿದಿದ್ದು ಧಾರವಾಡದ ಡಿಮಾನ್ಸ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿ ಎಂದು ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದರು.
ಮುಸ್ಲಿಂ ಧರ್ಮಗುರುವೊಬ್ಬರಿಗೆ ಭಯೋತ್ಪಾದಕರ ನಟಿದೆ ಹಾಗೂ ಅವರಿಗೆ ಭಯೋತ್ಪಾದಕ ಸಂಘಟನೆಗಳಿಂದ ಹಣ ಬರುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಅಧಿವೇಶನ ನಡೆಸುತ್ತಿದ್ದು ಈ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಯತ್ನಾಳ ರಾಜ್ಯದಲ್ಲಿ ಶಾಂತಿ ಕದಡುವ ಹೇಳಿಕೆ ನೀಡಿದ್ದಾರೆ. ಸ್ಥಾನಮಾನ ಸಿಗದೇ ಹತಾಶರಾಗಿದ್ದರೆ ಧಾರವಾಡದ ಡಿಮಾನ್ಸಗೆ ಬಂದು ಚಿಕಿತ್ಸೆ ಪಡೆಯಲಿ. ಅದನ್ನು ಬಿಟ್ಟು ಸಮಾಜದಲ್ಲಿ ವಿಷ ಬೀಜ ಬಿತ್ತುವುದು ಬೇಡ ಎಂದರು.ಇರಾಕಿನಲ್ಲಿರುವ ಬಾಗ್ದಾದ್ ಮೆಹಬೂಬ ಸುಬಾನಿ ದರ್ಗಾ ಮುಸ್ಲಿಂರ ಪವಿತ್ರ ಸ್ಥಳಗಳಲ್ಲಿ ಒಂದು. ಭಾರತದಿಂದ ಸಾವಿರಾರು ಮುಸ್ಲಿಂರು ಯಾತ್ರೆಗೆ ಹೋಗುತ್ತಾರೆ. ಅಲ್ಲಿಯ ಧರ್ಮಗುರು ಖಾಲಿದ ಗಿಲಾನಿ ಅವರಿಗೆ ಭಯೋತ್ಪಾದಕರ ನಂಟಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿಯ ಗಡ್ಕರಿ ಸಹ 12 ವರ್ಷಗಳ ಹಿಂದೆ ಈ ಧರ್ಮಗುರುಗಳನ್ನು ಭೇಟಿಯಾದ ಫೋಟೋ ಸಹ ಇದೆ. ಇಷ್ಟಾಗಿಯೂ ಯತ್ನಾಳ ಭಯತ್ಪಾದಕರಿಗೆ ಹೋಲಿಸುವುದು ತಪ್ಪು. ಅವರದ್ದು ಅತಿರೇಕದ ವರ್ತನೆಯಾಗಿದೆ. ಧರ್ಮ ಅನವಶ್ಯಕ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಕೂಡಲೇ ಮಾನಸಿಕ ಸ್ಥಿಮಿತತೆ ಕಾಪಾಡಿಕೊಳ್ಳುವ ಚಿಕಿತ್ಸೆಯಂತೂ ಬೇಕಾಗಿದೆ ಎಂದರು.
ಯತ್ನಾಳ ಅವರ ರಾಜಕೀಯ ಭವಿಷ್ಯ ಮುಗಿದಂತೆ ಕಾಣುತ್ತಿದೆ. ಹೀಗಾಗಿ ಏನೇನೋ ಹೇಳಿಕೆ ನೀಡುವ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಕೇಂದ್ರ ಸಚಿವರಾಗಿದ್ದವರು. ತಿಳಿದವರು. ಕೀಳು ಹೇಳಿಕೆ ಮೂಲಕ ದೊಡ್ಡ ಪ್ರಚಾರ ತೆಗೆದುಕೊಳ್ಳುವುದು ಅವರ ಮೌಲ್ಯವನ್ನು ಮತ್ತಷ್ಟು ಕುಂಠಿತಗೊಳಿಸುತ್ತದೆ. ಯತ್ನಾಳ ವಿವಾದಾತ್ಮಕ ಹೇಳಿಕೆ ಬಗ್ಗೆ ಧರ್ಮಗುರುಗಳ ತೀರ್ಮಾನದ ನಂತರ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಮಟಗಾರ ಹೇಳಿದರು.