ಮುಳ್ಳೂರು ಗ್ರಾಮದ ಜಂಕ್ಷನ್‌ನಲ್ಲಿರುವ ಅರಳಿಮರದ ಕಟ್ಟೆಯಲ್ಲಿ ಗಣಪತಿ ಮತ್ತು ನಾಗದೇವತೆಯ ವಿಗ್ರಹವನ್ನು ಗ್ರಾಮಸ್ಥರೊಬ್ಬರಿಗೆ ಸೇರಿದ ಗೋವುವೊಂದು ನೋಡುತ್ತಾ ನಿಂತಿರುವುದು ಜನ ಮನ ಸೆಳೆದಿದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಮುಳ್ಳೂರು ಗ್ರಾಮದ ಜಂಕ್ಷನ್‌ನಲ್ಲಿರುವ ಅರಳಿಮರದ ಕಟ್ಟೆಯಲ್ಲಿ ಗಣಪತಿ ಮತ್ತು ನಾಗದೇವತೆಯ ವಿಗ್ರಹವನ್ನು ಗ್ರಾಮಸ್ಥರೊಬ್ಬರಿಗೆ ಸೇರಿದ ಗೋವುವೊಂದು ನೋಡುತ್ತಾ ನಿಂತಿರುವುದು ಜನ ಮನ ಸೆಳೆದಿದೆ.

ಗಣಪತಿ ಮತ್ತು ನಾಗದೇವತೆಯ ಕಲ್ಲಿನ ವಿಗ್ರಹ ಪ್ರತಿಷ್ಠಾಪಿಸಿರುವ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ ಗ್ರಾಮಸ್ಥರು, ಮಹಿಳೆಯರು ಇಲ್ಲಿಗೆ ಬಂದು ಗಣಪತಿ ಮತ್ತು ನಾಗದೇವತೆಗೆ ಹೂವು, ಹಣ್ಣು, ಕುಂಕುಮ ಇಟ್ಟು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತ ಭಕ್ತರು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುವುದು ರೂಢಿ. ಗ್ರಾಮದಲ್ಲಿ ನಡೆಯುವ ಹಬ್ಬ ಉತ್ಸವ, ಗಣೇಶನ ಉತ್ಸವದ ಮೆರವಣಿಗೆ, ಗಣಪತಿ ಮತ್ತು ನಾಗದೇವತೆಗೆ ಪೂಜಿಸಿದ ನಂತರವೇ ಮುಂದೆ ಸಾಗುತ್ತದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಅರಳಿಮರದ ಕಟ್ಟೆಯಲ್ಲಿರುವ ಗಣಪತಿ ಮತ್ತು ನಾಗದೇವತೆ ಬಗ್ಗೆ ಹೆಚ್ಚಿನ ಭಯಭಕ್ತಿ ಇಟ್ಟುಕೊಂಡಿದ್ದಾರೆ.

ಕೆಲವು ತಿಂಗಳಿನಿಂದ ಪ್ರತಿದಿನ ಬೆಳಗ್ಗೆ ಗೋವು ವಿಗ್ರಹವನ್ನು ನೋಡುತ್ತಾ ನಿಂತಿರುವುದು ವಿಶೇಷ. ಗೋವು ಗ್ರಾಮಸ್ಥರು ದೇವರಿಗೆ ಪೂಜಿಸಿ ನೈವೇದ್ಯ ಮಾಡಿದ ಹೂವು ಹಣ್ಣನ್ನು ತಿನ್ನುವುದಿಲ್ಲ. ಗ್ರಾಮಸ್ಥರು ಇದನ್ನು ಗಮನಿಸಿ ಹತ್ತಿರ ಹೋದರೂ ಗೋವು ಅಲುಗಾಡದಂತೆ ನಿಲ್ಲುತ್ತದೆ. ಸುಮಾರು ಅರ್ಧ ಗಂಟೆ ಬಳಿಕ ಅರಳಿಮರದ ಕಟ್ಟೆಯಿಂದ ಕೆಳಗೆ ಇಳಿದು ಮನೆ ಕಡೆಗೆ ಹೋಗುತ್ತದೆ. ಪ್ರತಿ ದಿನವು ಈ ಗೋವಿನ ಜೊತೆ ಮತ್ತೊಂದು ಗೋವು ಕೆಳಗೆ ನಿಂತುಕೊಳ್ಳುತ್ತದೆ. ಸುಮಾರು ತಿಂಗಳುಗಳಿಂದ ಗೋವಿನ ದೈವಭಕ್ತಿ ಹೀಗೆ ನಡೆಯುತ್ತಿರುವುದನ್ನು ನೋಡಿ ಗ್ರಾಮಸ್ಥರಿಗೆ ಅಚ್ಚರಿ ಎನಿಸಿದೆ.