ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಹಿಂದು-ಮುಸ್ಲಿಂ ಭಾವೈಕ್ಯತೆಯ ಶ್ರೀ ಜ್ಞಾನೇಶ್ವರ ಮಠದಲ್ಲಿ ಮೂರು ದಿನಗಳವರೆಗೆ ನಡೆದ ಶ್ರೀಮದ್ ಪರಮಹಂಸ ಪೂರ್ಣಾನಂದ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಿಂದ ತೆರೆಗೊಂಡಿತು.ಶ್ರೀಮಠದ ಪೀಠಾಧಿಕಾರಿ ಶ್ರೀ ಬ್ರಹ್ಮಾನಂದ ಸ್ವಾಮಿಗಳ ನೇತೃತ್ವದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಅಂಗವಾಗಿ ಮಠದಲ್ಲಿ ಮೂರು ದಿವಸಗಳಿಂದ ಕಾಕಡಾರತಿ ಪರಮಹಂಸ ಮಹಾಸ್ವಾಮಿಗಳಿಗೆ ಏಕಾದಶ ಆವರ್ತಣ ರುದ್ರಾಭೀಷೇಕ, ಪುಣ್ಯಾಹವಾಚನ, ಧರ್ಮಧ್ವಜಾರೋಹಣ, ಅನ್ನಪೂರ್ಣ ಪೂಜೆ, ಪಲ್ಲಕ್ಕಿ ಸೇವಾ, ಅಷ್ಟವದನ ಸೇವಾ, ಭಜನೆ, ದತ್ತಮಾಲಾ ಹೋಮ, ದತ್ತಮಾಲಾ ಹೋಮದ ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಗೋಪಾಳ ಕಾಲ ಅವಭೃತ ಸ್ನಾನ, ಬುತ್ತಿ ಪೂಜಾ, ವಿವಿಧ ವಾದ್ಯಮೇಳ ವೈಭವದೊಂದಿಗೆ ಪಲ್ಲಕ್ಕಿ ಸೇವೆ ಹಾಗೂ ಗುರುಗಳ ಭಾವಚಿತ್ರದೊಂದಿಗೆ ಗ್ರಾಮ ಪ್ರದಕ್ಷಿಣಿ, ಪರಮಹಂಸ ಮಹಾಸ್ವಾಮಿಗಳಿಗೆ ಗುರು ಭುಜಂಗ ಮಹಾಸ್ವಾಮಿಗಳಿಗೆ ನೈವೇದ್ಯ ಮಹಾ ಮಂಗಳಾರತಿ ಸಾಂಪ್ರದಾಯಕ ಧೂಪ, ಮಹಾಪ್ರಸಾದ ವಿತರಣೆ ನಡೆಯಿತು.
ಲೋಕಾಪುರ ಮತ್ತು ಅನವಾಲ ಸಂತರಿಂದ ಶಿವ ಭಜನಾ ಮಂಡಳಿ, ಜ್ಞಾನೇಶ್ವರ ಭಜನಾ ಮಂಡಳಿಯಿಂದ ಬೆಳಗಿನವರೆಗೆ ಜಾಗರಣಾ ಭಜನೆ ನಡೆಯಿತು.ಕುದುರೆ ಅದ್ಧೂರಿ ಮೆರವಣಿಗೆ:
ಗುರುವಾರ ಬೆಳಗ್ಗೆ ಬ್ರಹ್ಮಾನಂದ ಶ್ರೀಗಳು ಗೋಪಾಳಕಾಲ ಚಾಲನೆ ನೀಡಿದರು. ಪರಮಹಂಸರ ವಿಶೇಷ ಪೂಜೆ, ಅಲಂಕಾರ ಧೂಪ, ದೀಪ ಪ್ರಮುಖ ಬೀದಿ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಶ್ರೀ ಜ್ಞಾನೇಶ್ವರ ಮಠದಿಂದ ಆರಂಭವಾದ ಬ್ರಹ್ಮಾನಂದ ಶ್ರೀಗಳ ಕುದುರೆ ಮೆರವಣಿಗೆ ಹಾಗೂ ಪರಮಹಂಸ ಪೂರ್ಣಾನಂದ ಮಹಾಸ್ವಾಮಿಗಳ ಭಾವಚಿತ್ರ ಮೆರವಣಿಗೆಯು ವಿವಿಧ ವಾದ್ಯ ಮೇಳಗಳೊಂದಿಗೆ ಬಸವೇಶ್ವರ ವೃತ್ತ, ಮೇನ್ ಬಜಾರ್, ದೇಸಾಯಿ ವಾಡೆ ಮೂಲಕ ಶ್ರೀಮಠಕ್ಕೆ ತಲುಪಿತು. ಬಳಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.ಸಂಭ್ರಮದ ರಥೋತ್ಸವ : ಪರಮಹಂಸ ಪೂರ್ಣಾನಂದ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ರಥೋತ್ಸವ ಜರುಗಿತು. ವಿವಿಧ ಕಲಾ ಮೇಳಗಳು, ಕುಂಭ ಹೊತ್ತ ಮಹಿಳೆಯರು, ಕರಡಿ ಮಜಲು, ಹಾಗೂ ಸೌಂಡ್ ಸಿಸ್ಟಂ, ಬ್ಯಾಂಡ್ ಮೇಳ ಹೀಗೆ ಹಲವಾರು ವಿವಿಧ ವಾದ್ಯ ಮೇಳದೊಂದಿಗೆ ವಾಡೆಯವರೆಗೂ ಅದ್ಧೂರಿಯಾಗಿ ಜರುಗಿತು. ಭಕ್ತರು ಉತ್ತತ್ತಿ, ಹೂ ಎಸೆದು ಹರಕೆ ತೀರಿಸಿದರು. ನಂತರ ಪ್ರಸಾದ ಜರುಗಿತು. ರಥೋತ್ಸವ ಮಠದ ಆವರಣಕ್ಕೆ ಬಂದು ಸಮಾಪ್ತಿಗೊಂಡಿತು. ಲೋಕಾಪುರ ಹಾಗೂ ಸುತ್ತಮುತ್ತಲಿನ ಮಠದ ಭಕ್ತರು, ವಿವಿಧ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.