ಸ್ವಾತಂತ್ರ್ಯೋತ್ಸವವು ನಾವು ಕೇವಲ ವ್ಯಕ್ತಿಗಳಲ್ಲ, ದೇಶದ ಜನಸಮುದಾಯದ ಜವಾಬ್ದಾರಿಯುತ ಭಾಗ ಎಂಬುದನ್ನು ನೆನಪಿಸುವ ದಿನ ಎಂದು ಕಾರ್ಕ ತಹಸೀಲ್ದಾರ್ ಪ್ರದೀಪ್ ಆರ್. ಹೇಳಿದರು.

ಕಾರ್ಕಳ: ಸ್ವಾತಂತ್ರ್ಯೋತ್ಸವವು ನಾವು ಕೇವಲ ವ್ಯಕ್ತಿಗಳಲ್ಲ, ದೇಶದ ಜನಸಮುದಾಯದ ಜವಾಬ್ದಾರಿಯುತ ಭಾಗ ಎಂಬುದನ್ನು ನೆನಪಿಸುವ ದಿನ ಎಂದು ಕಾರ್ಕ ತಹಸೀಲ್ದಾರ್ ಪ್ರದೀಪ್ ಆರ್. ಹೇಳಿದರು.

ಕಾರ್ಕಳ ತಾಲೂಕು ಆಡಳಿತದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.ದೇಶದ ಸ್ವಾತಂತ್ರ್ಯವು ಸುದೀರ್ಘ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿದೆ. ಅನೇಕ ಹೋರಾಟಗಾರರ ತ್ಯಾಗದಿಂದ ಸುಮಾರು ಎರಡು ಶತಮಾನಗಳ ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡು 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಬಳಿಕ ದೇಶ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಇಂದು ಜಾಗತಿಕ ಮಟ್ಟದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಅಭಿವೃದ್ಧಿಯ ಪಯಣವನ್ನು ಮತ್ತಷ್ಟು ವೇಗಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅನಂತಶಯನ ವೃತ್ತದಲ್ಲಿ ತಹಸೀಲ್ದಾರ್ ಪ್ರದೀಪ್ ಆರ್. ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದವರೆಗೆ ಪಥಸಂಚಲನ ನಡೆಯಿತು. ಗಾಂಧಿ ಮೈದಾನದಲ್ಲಿಯೂ ತಹಶೀಲ್ದಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪೊಲೀಸರು, ಗೃಹರಕ್ಷಕ ದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದರು. ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಕುಮಾರ್ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಮಾತನಾಡಿದರು.

ಸನ್ಮಾನ: ಕಲಾಮ್ಸ್ ವರ್ಲ್ಡ್ ರೆಕಾರ್ಡ್ಸ್ ವತಿಯಿಂದ ಎಕ್ಸ್ಟ್ರಾಡಿನರಿ ಗ್ರಾಪ್ಸಿಂಗ್ ಪವರ್–ಗಿನ್ನಿಸ್ ಕಿಡ್ ಗೌರವ ಪಡೆದಿರುವ ಬಜಗೋಳಿಯ ಸಹಸ್ರಾ ಎಸ್. ಕೆಸಾಪುರ ಅವರನ್ನು ಅಭಿನಂದಿಸಲಾಯಿತು. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾಡಪ್ರಭು ಕೆಂಪೇಗೌಡ ಆಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೂ ಗೌರವ ಸಲ್ಲಿಸಲಾಯಿತು.ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೆರ್ವಾಜೆ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್. ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಂದ್ ವಂದಿಸಿದರು.