ಸಾರಾಂಶ
ಸತ್ಯಕ್ಕೆ ಹರಿಶ್ಚಂದ್ರನ ತರಹ ಒಂದೊಂದು ಮೌಲ್ಯಕ್ಕೆ ಒಬ್ಬೊಬ್ಬ ವ್ಯಕ್ತಿ ಆದರ್ಶವಾಗಿರುವ ಸಂಸ್ಕೃತಿ ನಮ್ಮದು. ಆದರೆ, ಶ್ರೀರಾಮನ ವ್ಯಕ್ತಿತ್ವ ಇಡೀ ಜೀವನಕ್ಕೆ ಆದರ್ಶ. ಮರ್ಯಾದ ಪುರುಷೋತ್ತಮ ಎಂದು ಕರೆಯಲ್ಪಡುವ ರಾಮ ಕಷ್ಟದ ಕಾಲದಲ್ಲಿ ಸ್ನೇಹಿತನಾಗಿರುವನು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸುಮಾರು 500 ವರ್ಷಗಳಿಂದ ಕನಸು ಕಂಡಿದ್ದ ಸಹಸ್ರಾರು ಹಿಂದೂಗಳು ಹಾಗೂ ಶ್ರೀರಾಮ ಭಕ್ತರ ಕನಸನ್ನು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಮಾಡುವ ಮೂಲಕ ನನಸು ಮಾಡಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.ತಾಲೂಕಿನ ನಂದಗುಡಿ ಊರಬಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತ್ಯಕ್ಕೆ ಹರಿಶ್ಚಂದ್ರನ ತರಹ ಒಂದೊಂದು ಮೌಲ್ಯಕ್ಕೆ ಒಬ್ಬೊಬ್ಬ ವ್ಯಕ್ತಿ ಆದರ್ಶವಾಗಿರುವ ಸಂಸ್ಕೃತಿ ನಮ್ಮದು. ಆದರೆ, ಶ್ರೀರಾಮನ ವ್ಯಕ್ತಿತ್ವ ಇಡೀ ಜೀವನಕ್ಕೆ ಆದರ್ಶ. ಮರ್ಯಾದ ಪುರುಷೋತ್ತಮ ಎಂದು ಕರೆಯಲ್ಪಡುವ ರಾಮ ಕಷ್ಟದ ಕಾಲದಲ್ಲಿ ಸ್ನೇಹಿತನಾಗಿರುವನು, ಕತ್ತಲೆಯ ಭಯವನ್ನು ಹೋಗಲಾಡಿಸುವ ಬೆಳಕಾಗಿರುವನು. ರಾಮ ಮತ್ತು ರಾಮಾಯಣ ಈ ರಾಷ್ಟ್ರದ ಸಂಸ್ಕೃತಿಯ ವಾಹಕ. ಪೂರ್ವಭಾಷಿತನಾದ ರಾಮ ತನ್ನ ಶುಭ್ರ ಸ್ವಭಾವದ ಮೂಲಕ ಎಲ್ಲರನ್ನೂ ಆತ್ಮೀಯವಾಗಿ ಕಂಡವನು ಎಂದರು.ಸತ್ಯಕ್ಕೆ ಧಕ್ಕಿದ ಜಯ ಕಳೆದ ೫ ಶತಮಾನಗಳಿಂದ ರಾಮಮಂದಿರದ ವಿಷಯದಲ್ಲಿ ಗೊಂದಲಗಳು, ಅವಮಾನಗಳು, ಟೀಕೆ-ಟಿಪ್ಪಣಿಗಳೆಲ್ಲವನ್ನೂ ಅನುಭವಿಸಬೇಕಾಯಿತು. ಆದರೆ ರಾಮಮಂದಿರದ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ನೂರಾರು ಯುದ್ಧಗಳು, ಆಂದೋಲನಗಳು, ಜನಜಾಗೃತಿ ಕಾರ್ಯಕ್ರಮಗಳು, ಸಾಂವಿಧಾನಾತ್ಮಕ ಹೋರಾಟಗಳ ನಂತರ ಮಂದಿರವಲ್ಲೇ ಕಟ್ಟುವೆವು ಎಂಬ ಘೋಷವಾಕ್ಯ ನಿಜವಾಯಿತು. ಅಯೋಧ್ಯೆ ರಾಮಜನ್ಮಭೂಮಿ, ಅದು ರಾಮನಿಗೇ ಸೇರಿದ್ದು ಎಂಬ ಸತ್ಯಕ್ಕೆ ಜಯವಾಯಿತು ಎಂದು ನುಡಿದರು.
ಮಾಜಿ ಜಿಪಂ ಸದಸ್ಯ ಸಿ. ನಾಗರಾಜ್. ಮಾಜಿ ಚೇರ್ಮನ್ ಕೆ.ಎನ್. ಚೆನ್ನಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ನಟರಾಜ್, ಸವಿತಾ ರಾಜಶೇಖರ್, ಗ್ರಾಪಂ ಸದಸ್ಯರಾದ ಶಿವರಾಜ್, ಶಾಂತಮ್ಮ ಹನುಮಂತಪ್ಪ, ಮಾಜಿ ತಾಪಂ ಸದಸ್ಯ ಸುಮಿತ್ರಮ್ಮ ಮಂಜುನಾಥ್, ಮಾಜಿ ಗ್ರಾಪಂ ಸದಸ್ಯ ಸಿ. ಮಂಜುನಾಥ್, ನಂದಗುಡಿ ಊರ ಬಾಗಿಲ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಸದಸ್ಯರಾದ ಶೋಬನ್ ಬಾಬು, ಚಂದ್ರಾಚಾರಿ, ಸುಬ್ಬಣ್ಣಾಚಾರಿ, ನಾಗೇಶ್, ರಘುನಾಥ್, ಚಂದ್ರಶೇಖರ್, ಹೊನ್ನೇಶ್ ಕುಮಾರ್, ಮಧುಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.