ಹಿಂದೂ ಮಹಾಗಣಪತಿ ಮಂಟಪಕ್ಕೆ ತಲುಪಿದ ಕಾಲ್ನಡಿಗೆ ಜಾಥಾದಲ್ಲಿ ಶಾಸಕ ಬಿ.ಪಿ.ಹರೀಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹರಿಹರ

ಯಾವುದೇ ವ್ಯಕ್ತಿ ಅವಿದ್ಯಾವಂತ ಆಗಿದ್ದರೂ ಪರವಾಗಿಲ್ಲ. ದುಶ್ಚಟಗಳಿಗೆ ಬಲಿಯಾಗಿರಬಾರದು. ನಾವೆಲ್ಲರೂ ಮನಸು ಮಾಡಿದರೆ ಮಾತ್ರ ದುಶ್ಚಟಗಳನ್ನು ಹೊಡೆದೋಡಿಸಿ ನಶಾಮುಕ್ತ ಭಾರತ ನಿರ್ಮಿಸಲು ಸಾಧ್ಯ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾಗಣಪತಿ ಹರಿಹರ ವತಿಯಿಂದ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ನಶಾಮುಕ್ತ ಭಾರತ ಕಾಲ್ನಡಿಗೆ ಜಾಥಾದಲ್ಲಿ ಅವರು ಮಾತನಾಡಿದರು.

140 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಹೆಚ್ಚಿನ ಜನರು ವಿವಿಧ ದುಶ್ಚಟಗಳಿಂದ ಬಳಲುತ್ತಿದ್ದಾರೆ. ಇದನ್ನು ನಾವು ನಿರ್ಮೂಲನೆ ಮಾಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮಾದಕ ವಸ್ತುಗಳನ್ನು ಉಪಯೋಗ ಅಥವಾ ಮಾರಾಟ ಕಂಡುಬಂದಲ್ಲಿ ಸ್ವತಃ ನಾವೇ ಜವಾಬ್ದಾರಿ ತೆಗೆದುಕೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಹಾಗೆಯೇ ಮಾಧ್ಯಮ ಮಿತ್ರರು ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ, ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಪೊಲೀಸ್ ಗ್ರಾಮಾಂತರ ವೃತ್ತ ನಿರೀಕ್ಷಕ ಸುರೇಶ್ ಸಗರಿ ಮಾತನಾಡಿ, ಪೊಲೀಸ್ ಇಲಾಖೆ ಡ್ರಗ್ಸ್, ಗಾಂಜಾ ಈ ರೀತಿಯ ಎಲ್ಲ ಮಾದಕ ವಸ್ತುಗಳ ಬಗ್ಗೆ ನಿರಂತರ ನಿಗಾ ವಹಿಸಿದೆ. ಹರಿಹರದಲ್ಲಿ ಎಲ್ಲಿಯೂ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ಇಲ್ಲ. ಅಕಸ್ಮಾತ್ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ. ಇಂಥ ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು. ಸಾರ್ವಜನಿಕರು ಸಹ ಇಲಾಖೆಯ ಬೆಂಬಲಕ್ಕೆ ನಿಂತರೆ ಮಾತ್ರ ನಶಾಮುಕ್ತ ಹರಿಹರ ಸಾಧ್ಯ ಎಂದು ಹೇಳಿದರು.

ಹರಿಹರದ ಗಾಂಧಿ ಮೈದಾನದಿಂದ ಪ್ರಾರಂಭಗೊಂಡು ಜಾಥಾವು ನಗರದ ಮುಖ್ಯ ರಸ್ತೆಗಳ ಮಾರ್ಗವಾಗಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ವೇದಿಕೆಯನ್ನು ತಲುಪಿತು.

ಕಾರ್ಯಕ್ರಮದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಸುರೇಶ್ ಚಂದಾಪುರ, ತಪೋವನ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಮೆಹರ್ವಾಡೆ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಗ್ರಾಮಾಂತರ ಅಧ್ಯಕ್ಷ ಎಂ.ಪಿ. ಲಿಂಗರಾಜ್, ನಗರಾಧ್ಯಕ್ಷ ರಾಜು ರೋಖಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಗುಡಿಮನಿ, ಮುಖಂಡ ಮೇಘರಾಜ, ನಗರಸಭಾ ಮಾಜಿ ಸದಸ್ಯ ಆಟೋ ಹನುಮಂತಪ್ಪ, ವಕೀಲ ವೀರೇಶ್ ಅಜ್ಜಣ್ಣನವರ್, ಆರ್.ಎಲ್. ಯೋಗೇಶ್, ಎಸ್.ಟಿ.ಎಫ್. ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸತೀಶ್ ಕುಮಾರ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ದಾದಿಯರು, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಕಾಶ್, ಟೆಕ್ವಾಂಡೊ ಸಂಸ್ಥೆಯ ಪ್ರಭಾಕರ್, ಸ್ಕ್ವಾಯ್ ಅಲೀ, ಧರ್ಮಸ್ಥಳ ಸಂಘದ ಬಾದಾಮಿ ನಟರಾಜ್, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.