ಸಾರಾಂಶ
ಮಹಾಲಿಂಗಪುರ : ಚಿಮ್ಮಡ ಭಾಗದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸೋಮವಾರ ಬೆಳಗ್ಗೆ 6 ಗಂಟೆಗೆ ಗ್ರಾಮ ಚಾವಡಿ ಪಕ್ಕದ ಕಾಮಣ್ಣನ ಕಟ್ಟೆ ಮೇಲೆ ರತಿ ಕಾಮರ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗಿತ್ತು. ಇಡೀ ದಿನ ರೈತರು ಮಹಿಳೆಯರು ರತಿ ಕಾಮರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಕಾಮಣ್ಣ ಸೇವಾ ಸಮಿತಿಯಿಂದ ವಿವಿಧ ಜನಪದ ತಂಡಗಳಿಂದ ಹರಿದೇಸಿ, ನಾಗೇಶಿ ಶಾವರಿಕೆ ಪದಗಳು ಹಾಗೂ ಗ್ರಾಮದ ಗಣಪತಿ ಗುಡಿ ಆವರಣದಲ್ಲಿ ಹೋಳಿ ಪದಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿಕ್ಕಮಕ್ಕಳು, ಯುವಕರು ಗುಂಪಾಗಿ ಹಲಿಗೆ ಬಾರಿಸುತ್ತ ಖುಷಿಪಟ್ಟರೆ, ನಿಷೇಧದ ನಡುವೆಯೂ ಹಲವು ಯುವಕರು ಬಣ್ಣದಾಟ ಆಡಿದರು. ರೈತರು, ಕಾರ್ಮಿಕರು ಹೊಸ ಬಟ್ಟೆ ತೊಟ್ಟು ಹೋಳಿ ಹಾಡು ಹಾಡುತ್ತಾ ಸಂತಸಪಟ್ಟರು. ಮಂಗಳವಾರ ಬೆಳಗ್ಗೆ ಗ್ರಾಮದ ಪ್ರಯುಖ ಬೀದಿಗಳಲ್ಲಿ ಸಂಗ್ರಹಿಸಿದ್ದ ಉರುವಲಿಗೆ ಬೆಂಕಿ ಹಚ್ಚಲಾಯಿತು. ರತಿ ಕಾಮರ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ನೂರಾರು ಜನರು, ಪ್ರಮುಖರು ಆಗಮಿಸಿದ್ದರು. ಬಾಗಲಕೋಟೆ ಲೋಕಸಭಾ ಅಭ್ಯರ್ಥಿ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ ಗ್ರಾಮಕ್ಕೆ ಭೇಟಿನೀಡಿ ರತಿಕಾಮರ ದರ್ಶನ ಪಡೆದರು.