ಸಾರಾಂಶ
ಮಂಡ್ಯದಲ್ಲಿ ಡಿಸೆಂಬರ್ 20-22ರವರೆಗೆ ನಡೆಯಲಿರುವ 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡ್ಯದಲ್ಲಿ ಡಿಸೆಂಬರ್ 20-22ರವರೆಗೆ ನಡೆಯಲಿರುವ 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿತು.ನಾಡದೇವಿ ಭುವನೇಶ್ವರಿ ದೇವಾಲಯವಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಿಂದ ಪ್ರಾರಂಭಗೊಂಡು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿದ ಕನ್ನಡ ರಥ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕೇಂದ್ರ ಕಚೇರಿಗೆ ಬುಧವಾರ ಆಗಮಿಸಿತು.
ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ, ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂದಿ ಮತ್ತು ಅಪಾರ ಸಂಖ್ಯೆ ಕನ್ನಡಿಗರು ಕನ್ನಡ ರಥಕ್ಕೆ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ಮಹೇಶ್ ಜೋಶಿ, ಕನ್ನಡ ರಥ ಸಂಚಾರ ಕನ್ನಡಿಗರಲ್ಲಿ ಸ್ವಾಭಿಮಾನವನ್ನು ತುಂಬುವ ಮತ್ತು ಮಂಡ್ಯದಲ್ಲಿ ಅಯೋಜಿತವಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತ ಆಸಕ್ತಿ ಹೆಚ್ಚಿಸಿದೆ. ಸಾಹಿತ್ಯ ಸಮ್ಮೇಳನದ ಅತ್ಯಂತ ಯಶಸ್ವಿಯಾಗಿ ನಡೆಯುವ ಸಂಕೇತ ಇದಾಗಿದೆ ಎಂದರು.