ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: "ಇಬ್ಬರು ಪುತ್ರರನ್ನು ಹೊಂದಿದ ತಾಯಿಗೆ ತವರಿಗೆ ಕರೆಸಿ ಉಡಿತುಂಬಿ, ಹಸಿರು ಸೀರೆ ಉಡಿಸಿ, ಹಸಿರು ಬಳೆ ತೊಡಸಬೇಕು. ಇಲ್ಲದಿದ್ದರೆ ಕೆಡುಕಾಗಲಿದೆ "ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಹೀಗೊಂದು ಗಾಳಿಸುದ್ದಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹರಡಿದೆ. ಈ ಸುದ್ದಿ ಹರಡಿದ್ದೇ ತಡ ಜನರು ಸೀರೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.
ಒಂದು ವಾರದಿಂದ ಎಲ್ಲೆಂದರಲ್ಲಿ ಇದೇ ಸುದ್ದಿ. ಗ್ರಾಮೀಣ ಭಾಗದಲ್ಲಂತೂ ಬಲು ಜೋರು ಚರ್ಚೆ. ಆದರೆ, ಇದನ್ನು ಯಾರು ಹೇಳಿದರು? ಏಕೆ ಆಚರಿಸಬೇಕು ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರವಿಲ್ಲ.ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವದಂತಿ ಹರಿದಾಡುತ್ತಿದೆ. ಇದು ಜನರನ್ನು ಭಯಗೊಳಿಸುವ ತಂತ್ರವೋ ಅಥವಾ ಬಟ್ಟೆ ಅಂಗಡಿ ವ್ಯಾಪಾರಿಗಳ ಗಿಮಿಕ್ ಗೊತ್ತಿಲ್ಲ. ಇನ್ನು ನೇಕಾರರು ನೂಲಿಗೆ ಬಣ್ಣ ಹಾಕುವ ವೇಳೆ ಬಣ್ಣ ಕೆಟ್ಟರೆ ಇಂತಹ ಗಾಳಿ ಸುದ್ದಿ ಹರಡಿಸುತ್ತಾರೆ ಎಂಬುದು ಕೆಲವು ಹಿರಿಯರು ಹೇಳುವ ಮಾತು.
ವದಂತಿ ಬೆನ್ನತ್ತಿ: ಕಳೆದ 8-10 ವರ್ಷಗಳ ಹಿಂದೆ ಒಬ್ಬನೇ ಗಂಡು ಮಗನಿದ್ದರೆ ಬೆಳ್ಳಿ ಕಡಗ ಕೊಡಬೇಕೆಂಬ ವದಂತಿ ಹಬ್ಬಿತ್ತು. ಆಗ ಕೂಡ ಬಂಗಾರ, ಬೆಳ್ಳಿ ಅಂಗಡಿಗಳಿಗೆ ಭರ್ಜರಿ ವ್ಯಾಪಾರ ನಡೆದಿತ್ತು. ಮತ್ತೊಮ್ಮೆ ಒಂದೇ ಗಂಡು ಮಗನನ್ನು ಹೆತ್ತ ತಾಯಿಗೆ ಸೀರೆ, ಹಸಿರು ಬಳೆ ಉಡಿಸುವ, ಮಗದೊಮ್ಮೆ ಸೊಸೆಯಂದಿರಿಗೆ ಅತ್ತೆಯಿಂದ ಸೀರೆ. ಹೀಗೆ ಪ್ರತಿವರ್ಷ ಏನಾದರೂ ಗಾಳಿ ಸುದ್ದಿ ಹರಡುತ್ತಲೇ ಇರುತ್ತದೆ. ಈ ವರ್ಷ ಇಬ್ಬರು ಪುತ್ರರನ್ನು ಹೊಂದಿದ ತಾಯಂದಿರಿಗೆ ಹಸಿರು ಸೀರೆ, ಹಸಿರು ಬಳೆ ಉಡಿಸಿ ಉಡಿತುಂಬಬೇಕು, ಇಲ್ಲದಿದ್ದರೆ ಕೆಡಕಾಗಲಿದೆ ಎಂಬ ಗುಲ್ಲು ಹಬ್ಬಿದೆ. ಹೀಗಾಗಿ ಇಬ್ಬರು ಪುತ್ರರನ್ನು ಹೆತ್ತ ತಾಯಿಯನ್ನು ತವರು ಮನೆಗೆ ಕರೆಸಿ ಈ ಸೀರೆ ಉಡಿಸುವ ಕಾರ್ಯಕ್ರಮ ನಡೆಯುತ್ತಿದೆ.ಬಾಂಧವ್ಯ ಗಟ್ಟಿಗೊಳ್ಳಲು ಸಹಕಾರಿ: ಈ ರೀತಿಯ ನೆಪದಲ್ಲಾದರೂ ಹೆಣ್ಣು ಮಗಳು ತವರು ಮನೆಗೆ ಬಂದು ಅಲ್ಲಿ ನೀಡುವ ಉಡುಗೊರೆ ತೆಗೆದುಕೊಂಡು ತವರು ಮನೆಗೆ ಒಳಿತಾಗಲಿ ಎಂದು ಹರಸಿ ಹೋಗುತ್ತಾಳೆ. ಇದರಿಂದಾಗಿ ತವರು ಮನೆಯ ಸಂಬಂಧ ಗಟ್ಟಿಗೊಳ್ಳುತ್ತವೆ ಎಂಬುದು ಹಿರಿಯರ ಮಾತು.
ಅಂಗಡಿಗಳಲ್ಲಿ ಜನಜಂಗುಳಿ: ಈ ವದಂತಿ ಹರಡಿದ್ದೇ ತಡ ಜನರು ಬಟ್ಟೆ ಅಂಗಡಿಗಳಲ್ಲಿ ಹಸಿರು ಸೀರೆ ಖರೀದಿಸಲು ಮುಗಿ ಬಿದ್ದಿದ್ದಾರೆ. ನಗರ, ಪಟ್ಟಣ ಅಷ್ಟೇ ಅಲ್ಲದೇ ಗ್ರಾಮಗಳಲ್ಲಿರುವ ಸಣ್ಣ-ಪುಟ್ಟ ಬಟ್ಟೆ ಅಂಗಡಿಗಳಲ್ಲೂ ಹಸಿರು ಸೀರೆ ಖರೀದಿಸಲು ಮುಗಿಬೀಳುತ್ತಿದ್ದಾರೆ.ಆಚರಣೆ ತಪ್ಪೇನಿಲ್ಲ: ಕೆಲವರು ಇಂತಹ ಆಚರಣೆ ಮೌಢ್ಯವೆನ್ನುತ್ತಾರೆ. ಆದರೆ, ಇಂದಿನ ಆಧುನಿಕ ದಿನಮಾನಗಳಲ್ಲಿ ಮಕ್ಕಳಿಗೆ ಸಂಬಂಧಗಳ ಬೆಲೆ ಗೊತ್ತಿಲ್ಲದಂತಾಗಿದೆ. ಬಂಧು-ಬಾಂಧವರನ್ನು ಒಂದೆಡೆ ಸೇರಿಸಿ ಎಲ್ಲರೂ ಸೇರಿ ಸಂಭ್ರಮಿಸಲು ಇಂತಹ ಆಚರಣೆ ಸಹಕಾರಿಯಾಗುತ್ತವೆ. ಹಾಗಾಗಿ ಇಂತಹ ಆಚರಣೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಲಕ್ಷ್ಮಪ್ಪ ಕೊರವರ, ಶಾರದಾ ಕೊರವರ ದಂಪತಿ ಹೇಳುವ ಮಾತು.
ವದಂತಿಯೋ, ಮೂಢನಂಬಿಕೆಯೊ ಗೊತ್ತಿಲ್ಲ. ಹಿರಿಯರು ಹೇಳಿದಂತೆ ನಮ್ಮ ಸಹೋದರಿಯರನ್ನು ತವರು ಮನೆಗೆ ಕರೆಸಿ ಹಸಿರು ಸೀರೆ, ಹಸಿರು ಬಳೆ ಉಡಿಸಿ, ಉಡಿತುಂಬಿ, ಆರತಿ ಮಾಡಿ ಕಳಿಸಿದ್ದೇವೆ ಎಂದು ಗೋಪನಕೊಪ್ಪದ ಸಂತೋಷ ಹರಿವಾಣ ಹೇಳಿದರು.ವದಂತಿಯ ಬಗ್ಗೆ ನಮಗೆ ಹೆಚ್ಚಿನ ಮಾಹಿತಿಯಿಲ್ಲ. ಕಳೆದೊಂದು ವಾರದಿಂದ ಅಂಗಡಿಗೆ ಬರುವವರು ಹಸಿರು ಸೀರೆಗಳನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ. ಕಳೆದ ಬಾರಿಗಿಂತ ಈಗ ಹಸಿರು ಬಣ್ಣದ ಬಗೆಬಗೆಯ ಸೀರೆ ಹೆಚ್ಚಾಗಿ ತರಿಸಿದ್ದೇವೆ ಎಂದು ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ನ ಸಿಬ್ಬಂದಿ ವೀರೇಶ ಹೇಳಿದರು.