ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಆರ್.ವಿ. ಸರಾಫ್ ಹೆಸರಿನ ಪ್ರಶಸ್ತಿ ನೀಡುವುದಾಗಿ ಘೋಷಣೆ
ಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಗಲಿದ ಸಾಹಿತಿ, ವೈದ್ಯ, ಸಮಾಜ ಸೇವಕ ಡಾ. ಆರ್. ವಿ. ಸರಾಫ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ತಮ್ಮ ವೃತ್ತಿ ಜೀವನಕ್ಕೆ ಮತ್ತು ಸಾಹಿತ್ಯಕ ಕಾರ್ಯಗಳಿಗೆ ಮಾರ್ಗದರ್ಶಿಯಾಗಿ ನಿಂತ ಬಗೆಯನ್ನು ಸ್ಮರಿಸಿದರಲ್ಲದೇ ತಾವು ಕಲಿಸುತ್ತಿದ್ದ ಶಾಲಾ ಮಕ್ಕಳ ಬಿಸಿಯೂಟಕ್ಕೆ ತರಕಾರಿಯನ್ನು ಸ್ವತಃ ಸರಾಫ್ ರವರೇ ತಂದುಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿದರು.ಕಸಾಪ ತಾಲೂಕಾಧ್ಯಕ್ಷ ಗಂಗಾಧರ್ ನಾಯ್ಕ ಮಾತನಾಡಿ, ಪ್ರತಿವರ್ಷ ಶಿಕ್ಷಣ, ವೈದ್ಯಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆಯನ್ನು ಸಲ್ಲಿಸಿರುವ ಓರ್ವರಿಗೆ ಡಾ. ಆರ್.ವಿ. ಸರಾಫ್ ಹೆಸರಿನ ಪ್ರಶಸ್ತಿಯನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವುದೆಂದು ಘೋಷಿಸಿದರು.
ಜನತಾ ವಿದ್ಯಾಲಯದ ಪ್ರಾಂಶುಪಾಲ ಜಿ.ಎಸ್. ಹೆಗಡೆ, ಮಾನಾಸುತ ಶಂಭು ಹೆಗಡೆ, ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಆಶಾ ಕಲ್ಮನೆ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಕೆರೆಕಟ್ಟೆ, ಸಾಹಿತಿ ಪೂರ್ಣಿಮಾ ಕರ್ಕಿಕರ್, ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕಾರ್ಯಕಾರಿ ಸಮಿತಿಯ ಪೂರ್ಣಿಮಾ ಕರ್ಕಿಕರ್, ಕೃಷ್ಣ ಮೊಗೇರ್ ಸರಾಫ್ ಅವರ ಒಡನಾಟದ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಿಸಿಕೊಂಡರು. ಸಾಹಿತಿ ಶ್ರೀಧರ್ ಶೇಟ್ ಸರಾಫ್ ಅವರ ಸಾಹಿತ್ಯಕ, ಸಾಮಾಜಿಕ, ಧಾರ್ಮಿಕ, ಪತ್ರಿಕಾ ಕ್ಷೇತ್ರ ಹೀಗೆ ಹಲವು ಕ್ಷೇತ್ರದ ಸಾಧನೆ ಸ್ಮರಿಸಿ ಕಾರ್ಯಕ್ರಮ ನಿರೂಪಿಸಿದರು.