ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಬಿಆರ್ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಕೆ.ಗುಡಿ ವಲಯದಲ್ಲಿ ವಲಯದ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ್ಗೌಡ ಬೇರೆಡೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ನಲ್ಲೂರು ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಲ್ಲಿ ಸೋಮವಾರ ಸಂಜೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಇಲಾಖೆಯ ಅಧಿಕಾರಿಗಳು, ನೌಕರರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಹತ್ತಾರು ಮಂದಿ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿನೋದ್ಗೌಡ ಜನಸ್ನೇಹಿ, ರೈತ ಸ್ನೇಹಿಯಾಗಿದ್ದರು. ಇವರು ತಮಗೆ ಕಾಡುಪ್ರಾಣಿಗಳ ಉಪಟಳದಿಂದ ರಕ್ಷಣೆ ನೀಡಿದ್ದರು. ಇವರು ಅಧಿಕಾರದಲ್ಲಿದ್ದ ೨ ವರ್ಷ ೩ ತಿಂಗಳ ಅವಧಿಯಲ್ಲಿ ನಮ್ಮ ಬೆಳೆಗಳು ಕಾಡುಪ್ರಾಣಿಗಳಿಂದ ರಕ್ಷಣೆ ಪಡೆದಿದ್ದವು. ನಾವು ಮಧ್ಯರಾತ್ರಿಯಲ್ಲಿ ದೂರವಾಣಿ ಮೂಲಕ ಕರೆ ಮಾಡಿದರೂ ನಮ್ಮ ಕರೆಗೆ ಸ್ಪಂದಿಸಿ ತಕ್ಷಣ ತಮ್ಮ ಸಿಬ್ಬಂದಿಯೊಂದಿಗೆ ಕೆಲವೊಮ್ಮೆ ಖುದ್ದು ಹಾಜರಾಗಿ ಆನೆ, ಜಿಂಕೆ, ಇತರೆ ಕಾಡುಪ್ರಾಣಿಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗುತ್ತಿದ್ದರು.ಜನರ ಬಳಿಗೆ ನೇರವಾಗಿ ಬಂದು ಅವರ ಸಮಸ್ಯೆ ಆಲಿಸಿ ಬೆಳೆ ನಷ್ಟವಾದರೆ ಸರ್ಕಾರದಿಂದ ಬರುವ ಪರಿಹಾರವನ್ನು ತಕ್ಷಣ ದೊರಕಿಸಿಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ಅಲ್ಲದೆ ನಾವು ಆನೆಗಳ ರಕ್ಷಣೆಯಿಂದ ಇಲ್ಲಿಗೆ ಬೇಲಿ ಬೇಕು ಎಂದಾಗ ತಕ್ಷಣ ತೂಗುತಂತಿಯ ಬೇಲಿಯನ್ನು ಹಾಕಿಸಿ ನಮಗೆ ರಕ್ಷಣೆ ನೀಡಿದ್ದರು. ಇಂತಹ ಅಧಿಕಾರಿಯನ್ನು ಈ ಭಾಗದಲ್ಲಿ ನಾವು ಕಂಡೆ ಇರಲಿಲ್ಲ ಎಂದು ಬಣ್ಣಿಸಿದರು.ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಮಲ್ಲೇಶಪ್ಪ ಮಾತನಾಡಿ, ವಿನೋದ್ಗೌಡ ಕೆ. ಗುಡಿ ವಲಯದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇವರು ಇಲ್ಲಿನ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು. ೪೦ ರಿಂದ ೫೦ ಲಕ್ಷ ರು. ವರೆಗಿದ್ದ ಪ್ರವಾಸೋದ್ಯಮದ ಆದಾಯವನ್ನು ೧ ಕೋಟಿ ರು.ಗೆ ಏರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ತಮ್ಮ ಸಿಬ್ಬಂದಿಯೊಂದಿಗೂ ಇವರು ಅವಿನಾಭಾವ ಸಂಬಂಧ ಹೊಂದಿದ್ದರು. ಇವರ ಅವಧಿಯಲ್ಲಿ ಕೆ. ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.ಆರ್ಎಫ್ಒ ವಿನೋದ್ಗೌಡ ಮಾತನಾಡಿ, ನನ್ನ ಅವಧಿಯಲ್ಲಿ ನಾವು ಇಷ್ಟು ಕೆಲಸಗಳನ್ನು ಮಾಡಲು ನನ್ನ ಸಿಬ್ಬಂದಿ ಸಹಕಾರವೇ ಕಾರಣವಾಗಿದೆ. ಅಲ್ಲದೆ ಜನರೊಂದಿಗೆ ನಮ್ಮ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡಿದ್ದೂ ಕೂಡ ಕಾರಣವಾಗಿದೆ. ನನ್ನ ಮೇಲಧಿಕಾರಿಗಳು ನನಗೆ ನೀಡಿದ ಉತ್ತಮ ಬೆಂಬಲದಿಂದ ನಾನು ಇಲ್ಲಿ ಕೆಲ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಇದಕ್ಕೆ ಕಾರಣರಾದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ರೈತರು, ಸಾರ್ವಜನಿಕರು ವಿನೋದ್ಗೌಡ ಹಾಗೂ ಹೊಸದಾಗಿ ಇಲ್ಲಿಗೆ ಬಂದಿರುವ ಆರ್ಎಫ್ಒ ನರೇಶ್ರಿಗೆ ಗೌರವ ಸಮರ್ಪಣೆಯನ್ನು ಮಾಡಿದರು. ಎಸಿಎಫ್ ಉಮೇಶ್, ಮಂಜುನಾಥ್, ಡಿಆರ್ಎಫ್ಒ ಸದಾಶಿವ, ಟಿ. ಸುಂದರ್, ಚಂದ್ರಕುಮಾರ್ ಸೇರಿದಂತೆ ಅನೇಕರು ಇದ್ದರು.