ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಬೇಕಾದರೇ ಸತತ ಪ್ರಯತ್ನದೊಂದಿಗೆ ಅತ್ಯುನ್ನತ ಗುರಿಯನ್ನಿಟ್ಟಕ್ಕೊಳ್ಳಬೇಕು ಎಂದು ತಹಸೀಲ್ದಾರ್ ಡಾ.ಮೋಹನ್ ಭಸ್ಮೆ ಹೇಳಿದರು.ನಗರದ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಬಿಇಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಾದವರು ಓದಿನಲ್ಲಿ ಸದಾ ಹೊಸದನ್ನು ಹುಡುಕುವ ಗುಣವನ್ನುಟ್ಟಿಕೊಂಡು ಬದುಕಿನ ಕಷ್ಟಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತಮ್ಮಲ್ಲಿರುವ ದಿವ್ಯಶಕ್ಕಿಯನ್ನು ಸಮಯೋಚಿತವಾಗಿ ಬಳಸಿಕೊಂಡು ಉನ್ನತವಾದ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೋಕಾಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಡಿ.ಚುನಮರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಶಿಕ್ಷಣ ಪದ್ಧತಿ ಅತ್ಯಂತ ಪ್ರಾಚೀನವಾದುದು. ಜಗತ್ತಿಗೆ ಹೊಸ ಅವಿಸ್ಕಾರಗಳನ್ನು ನೀಡಿದ ಕೀರ್ತಿ ನಮ್ಮ ಭಾರತೀಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವಿರಾಜ ಮೋದಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಶಿಕ್ಷಣಾರ್ಥಿಗಳೊಂದಿಗೆ ತಹಸೀಲ್ದಾರ್ರು ಸಂವಾದ ನಡೆಸಿದರು.
ಸಮಾರಂಭದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಆರ್.ಎಂ.ವಾಲಿ, ಪ್ರಾಧ್ಯಾಪಕರಾದ ಪ್ರೊ.ಎಸ್.ಆರ್.ಮುದ್ದಾರ, ಪ್ರೊ.ಡಿ.ಎಸ್.ಪತ್ತಾರ, ಪ್ರೊ.ವೈ.ಬಿ.ಕೊಪ್ಪದ, ಪ್ರೊ.ಎಸ್.ಎಸ್.ಗಾಣಿಗೇರ, ಪ್ರೊ.ಬಿ.ಎಂ.ಮುಶೆಪ್ಪಗೋಳ, ಪ್ರೊ.ಕೆ.ಜಿ.ಜಾಳಿಹಾಳ ಸೇರಿದಂತೆ ಬೋಧಕೇತರ ಸಿಬ್ಬಂದಿಯವರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಪ್ರಶಿಕ್ಷಣಾರ್ಥಿನಿ ಅಕ್ಷತಾ ಭದ್ರಶೆಟ್ಟಿ ಮತ್ತು ಪ್ರತೀಕ್ಷಾ ತೈಕಾರ ನಿರೂಪಿಸಿದರು. ಪ್ರಶಿಕ್ಷಣಾರ್ಥಿನಿ ರುಕ್ಮೀಣಿ ಮೇತ್ರಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿನಿ ಶ್ವೇತಾ ಪಾಟೀಲ ಪುಷ್ಪಾರ್ಪಣೆ ನಡೆಸಿದರು. ಪ್ರಶಿಕ್ಷಣಾರ್ಥಿನಿ ಪೂಜಾ ಕದಮ್ ವಂದಿಸಿದರು.